ಬೀದರ :ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ನಿರ್ದೇಶನದಂತೆ ಬೀದರ ಜಿಲ್ಲೆಯಲ್ಲಿನ ಎಲ್ಲಾ ನ್ಯಾಯಾಲಯಗಳಲ್ಲಿ ಸೆ.19ರಂದು ಇ-ಮೆಗಾ ಲೋಕ್ ಅದಾಲತ್ ನಡೆಯಿತು.
ಇದರಲ್ಲಿ ಒಟ್ಟು 293 ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ 3663 ಪ್ರಕರಣಗಳನ್ನು ರಾಜಿ ಸಂದಾನಕ್ಕಾಗಿ ಗುರುತಿಸಲಾಗಿತ್ತು.
ಈ ಪೈಕಿ 281 ವ್ಯಾಜ್ಯಪೂರ್ವ ಮತ್ತು 1374 ಬಾಕಿ ಪ್ರಕರಣಗಳು ಸೇರಿ ಒಟ್ಟು 1655 ಪ್ರಕರಣಗಳನ್ನು ರಾಜಿ ಸಂದಾನದ ಮೂಲಕ ಇತ್ಯರ್ಥಗೊಳಿಸಲಾಗಿದೆ. ಒಟ್ಟು ರೂ. 4,73,94,803 ರಾಜಿ ಸಂದಾನದ ಮೊತ್ತವಾಗಿದೆ.
ಇ- ಮೆಗಾ ಲೋಕ್ ಅದಾಲತ್ ಯಶಸ್ವಿಗೊಳ್ಳಲು ಬೀದರ ಜಿಲ್ಲೆಗಳ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಯುತ ಕಾಡಲೂರ ಸತ್ಯನಾರಾಯಾಣಾಚಾರ್ಯ ಇವರು ಮಾರ್ಗದರ್ಶನ ಮಾಡಿರುತ್ತಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿದ್ರಾಮ ಟಿ.ಪಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.