ಕಾಸರಗೋಡು: ಓಬಿಸಿ ಮೋರ್ಚಾದ ಮಂಜೇಶ್ವರ ಪಂಚಾಯತ್ ಸಮಿತಿಯ ವತಿಯಿಂದ ವಿಶ್ವಕರ್ಮ ದಿನಾಚರಣೆಯು ಬುಧವಾರ ಜರಗಿತು. ಸರಕಾರದ ಕೋವಿಡ್-19 ನಿಯಮಾವಳಿಗಳನ್ನು ಪಾಲಿಸಿಕೊಂಡು ಸರಳವಾಗಿ ಮಂಜೇಶ್ವರ ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದಲ್ಲಿ ನಡೆದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಓಬಿಸಿ ಮೋರ್ಚಾದ ಕೇರಳ ರಾಜ್ಯ ಕೋಶಾಧಿಕಾರಿ, ನ್ಯಾಯವಾದಿ ನವೀನ್ ರಾಜ್ ಕೆ.ಜೆ. ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಈ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದ ಅವರು, ವಿಶ್ವಕ್ಕೆ ಅಪ್ರತಿಮ ಕೊಡುಗೆಯನ್ನು ನೀಡಿದ ಭಗವಾನ್ ಶ್ರೀ ವಿಶ್ವಕರ್ಮನ ಆರಾಧನೆ ಸನಾತನ ಸಂಸ್ಕೃತಿಯ ದ್ಯೋತಕವಾಗಿದೆ. ವಿಶ್ವಕರ್ಮ ದೇವನ ಅನುಗ್ರಹ ಸರ್ವ ಶ್ರಮ ಜೀವಿಗಳಿಗೂ ಪ್ರಾಪ್ತಿಯಾಗಲೆಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬಿಜೆಪಿ ಮಂಜೇಶ್ವರ ಮಂಡಲ ಉಪಾಧ್ಯಕ್ಷ ಪದ್ಮನಾಭ ಕಡಪ್ಪರ ವಹಿಸಿದ್ದರು. ಈ ಸಂದರ್ಭದಲ್ಲಿ ಓಬಿಸಿ ಮೋರ್ಚಾ ಮಂಡಲ ಅಧ್ಯಕ್ಷ ಚಂದ್ರಹಾಸ ಪೂಜಾರಿ ಕಡಂಬಾರು, ಯುವಮೋರ್ಚಾ ನೇತಾರ ಗುರುಕಿರಣ್ ಆಚಾರ್ಯ ಕಾಳಿಕಾಂಬಾ, ಹೊಸಂಗಡಿ ಶ್ರೀ ಅಯ್ಯಪ್ಪ ಕ್ಷೇತ್ರದ ಗುರುಸ್ವಾಮಿ ಉದಯ ಪಾವಳ, ಮೋಹನ್ ದಾಸ್ ಸುಂಕದಕಟ್ಟೆ , ಪದ್ಮನಾಭ ಆಚಾರ್ಯ ಮೀಯಪದವು ಮೊದಲಾದವರು ಉಪಸ್ಥಿತರಿದ್ದರು.
ಓಬಿಸಿ ಮೋರ್ಚಾದ ಮೀಡಿಯಾ ಸೆಲ್ ಸಂಚಾಲಕ ರತನ್ ಕುಮಾರ್ ಹೊಸಂಗಡಿ ಸ್ವಾಗತಿಸಿ, ಓಬಿಸಿ ಮೋರ್ಚಾದ ಪಂಚಾಯತ್ ಸಮಿತಿಯ ಕಾರ್ಯದರ್ಶಿ ದಯಾಪ್ರಸನ್ನ ಆಚಾರ್ಯ ವಂದಿಸಿದರು.