ಮಡಿಕೇರಿ: ಧಾರ್ಮಿಕ ಸಭೆಯ ಸಂಬಂಧ ಜಿಲ್ಲೆಯಿಂದ ದೆಹಲಿಗೆ ಹೋಗಿ ಹಿಂತಿರುಗಿರುವ 14 ಮಂದಿಯ ಸಾಂಸ್ಥಿಕ ಸಂಪರ್ಕ ತಡೆ ಅವಧಿ ಮುಗಿದಿದ್ದು, ಅವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು, ಆದರೂ ಅವರನ್ನು 14 ದಿನಗಳ ಕಡ್ಡಾಯ ಗೃಹ ಸಂಪರ್ಕ ತಡೆಯಲ್ಲಿರುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರೆ.
ಜಿಲ್ಲೆಯಿಂದ ದೆಹಲಿಗೆ ತೆರಳಿದ ಒಟ್ಟು 24 ಜನರ ಪೈಕಿ 5 ಜನರು ದೆಹಲಿಯಲ್ಲಿ ಮತ್ತು ಇನ್ನು 5 ಮಂದಿ ಹೊರ ಜಿಲ್ಲೆಗಳಲ್ಲಿ ವಾಸವಿದ್ದು, ಉಳಿದ ಎಲ್ಲಾ 14 ಜನರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ನಲ್ಲಿ ಇರಿಸಲಾಗಿತ್ತು. ಈ ಎಲ್ಲಾ 14 ಜನರ ಸಾಂಸ್ಥಿಕ ಸಂಪರ್ಕ ತಡೆ ಅವಧಿ ಮುಗಿದಿರುವುದರಿಂದ ಹಾಗೂ ಇವರಿಗೆ ಕೊರೋನಾ ವೈರಸ್ನ ಲಕ್ಷಣಗಳಿಲ್ಲದಿರುವುದರಿಂದ ಮತ್ತು ಅವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ, ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಬಂದಿರುವುದರಿಂದ ಅವರುಗಳನ್ನು ಸರ್ಕಾರದ ನಿರ್ದೇಶನದಂತೆ ಮಡಿಕೇರಿಯ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ಅವರು ಸಪಷ್ಟಪಡಿಸಿದ್ದಾರೆ.
ಇವರ ಆರೋಗ್ಯ ಸ್ಥಿತಿಯ ಬಗ್ಗೆ ನಿರಂತರವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ವತಿಯಿಂದ ಗಮನಿಸಲಾಗುವುದು ಎಂದೂ ಅವರು ಹೇಳಿದ್ದಾರೆ.