ದಾವಣಗೆರೆ: ನಗರದಲ್ಲಿ ಶುಕ್ರವಾರ ಸಂಜೆ ಮಾಸ್ಕ್ ಧರಿಸದವರಿಗೆ ಬಿಸಿ ಮುಟ್ಟಿಸಲು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ವತಃ ಫೀಲ್ಡಿಗಿಳಿದಿದ್ದರು. ಕೋವಿಡ್-19 ತಡೆಗಟ್ಟಲು ರಾಜ್ಯ ಸರ್ಕಾರದ ಆದೇಶದಂತೆ ಮಾಸ್ಕ್ ದಂಡ ಅಭಿಯಾನ ನಡೆಸಿದರು.
ಡಿಸಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ ನಗರದ ಅರಳಿಮರ ಸರ್ಕಲ್, ವಿದ್ಯಾನಗರ ಮುಖ್ಯರಸ್ತೆ, ಮಾಮಾಸ್ ಜಾಯಿಂಟ್ ರಸ್ತೆ, ಡೆಂಟಲ್ ಕಾಲೇಜ್ ರಸ್ತೆ, ಎಂಸಿಸಿ ಬಿ-ಬ್ಲಾಕ್, ಕಾಸಲ್ ಶ್ರೇಷ್ಟಿ ಪಾರ್ಕ್ ಹಾಗೂ ಪ್ರಮುಖ ಹೋಟೆಲ್, ಜಿಮ್, ಬಟ್ಟೆ ಅಂಗಡಿ ಸೇರಿದಂತೆ ಹಲವೆಡೆ ಸಂಚರಿಸಿ ಮಾಸ್ಕ್ ಹಾಕದಿರುವ ಜನರಿಗೆ ಕೋವಿಡ್ ಬಗ್ಗೆ ಅರಿವು ಮೂಡಿಸಿ, ಮಾಸ್ಕ್ ಕೊಡುವ ಜೊತೆಗೆ ದಂಡ ವಸೂಲಿ ಮಾಡಿದರು. ಈ ರೀತಿ ಒಟ್ಟು 350 ಮಂದಿಗೆ ದಂಡ ವಿಧಿಸಲಾಯಿತು.
ಇದೇ ವೇಳೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೋವಿಡ್-19 ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರವು ಎಲ್ಲಾ ಪ್ರಯತ್ನ ಮಾಡುತ್ತಿದೆ. ಸರ್ಕಾರದ ಆದೇಶದಂತೆ ನಗರ ಪ್ರದೇಶದಲ್ಲಿ 1000ದಿಂದ 250 ಮತ್ತು ಗ್ರಾಮೀಣ ಪ್ರದೇಶದಲ್ಲಿ ಮಾಸ್ಕ್ ಬಳಸದಿದ್ದರೆ 500ರಿಂದ 100 ರೂ. ದಂಡ ವಿಧಿಸಲು ಕ್ರಮ ಕೈಗೊಳ್ಳಲಾಗುವುದು. ಕೊರೋನಾ ಲಾಕಡೌನ್ ಆರಂಭವಾದ ಮಾರ್ಚ್ ತಿಂಗಳಿನಿಂದ ಈವರೆಗೆ ದಾವಣಗೆರೆ ನಗರದಲ್ಲಿ ಜನರಿಂದ ಒಟ್ಟು 84 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ ಎಂದರು.
ನಗರ ಡಿವೈಎಸ್ಪಿ ನಾಗೇಶ್ ಐತಾಳ್ ಸೇರಿದಂತೆ ಪೊಲೀಸ್ ಇಲಾಖಾ ಸಿಬ್ಬಂದಿಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.