ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ಚಿತ್ರ ನಟ ದಿವಂಗತ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಮಂಗಳವಾರ ಚಾಲನೆ ಸಿಗಲಿದೆ.
ಮೈಸೂರಿನ ಹೊರ ವಲಯದ ಹೆಚ್.ಡಿ.ಕೋಟೆ ರಸ್ತೆಯ ಉದ್ಭೂರು ಗೇಟ್ ಬಳಿಯ ಹಾಲಾಳು ೫ಎಕರೆ ನಿವೇಶನದಲ್ಲಿ ಶಿಲಾನ್ಯಾಸ ನಡೆಯಲಿದ್ದು,
ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನ್ ಲೈನ್ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಉದ್ದೇಶಿತ ೫ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣವಾಗಲಿದ್ದು, ಸ್ಥಳದಲ್ಲಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. ಸ್ಥಳದಲ್ಲಿ ವಾರ್ತಾ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿ, ಕೆಲಸ ಕಾರ್ಯವನ್ನು ನೋಡಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರ ನಟಿ ಡಾ.ಭಾರತಿ ವಿಷ್ಣುವರ್ಧನ್, ಚಿತ್ರ ನಟ ಅನಿರುದ್ಧ್ ,ಕೀರ್ತಿ ವಿಷ್ಣುವರ್ಧನ್ ಪಾಲ್ಗೊಳ್ಳಲಿದ್ದಾರೆ.
ಸೋಮವಾರ ಸ್ಮಾರಕ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಭಾರತೀ ವಿಷ್ಣುವರ್ಧನ್, ಸ್ವಚ್ಚತಾ ಕಾರ್ಯವನ್ನು, ಕಾರ್ಯಕ್ರಮಕ್ಕೆ ಮಾಡುತ್ತಿರುವ ಸಿದ್ಧತಾ ಕೆಲಸವನ್ನು ಪರಿಶೀಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಆರ್ಭಟದ ಸಮಯದಲ್ಲಿ ಎಲ್ಲರೂ ಚೆನ್ನಾಗಿರುವುದು ಮುಖ್ಯ. ಚೆನ್ನಾಗಿದ್ದರೆ ಮಾತ್ರ ಜೀವನ, ಹಾಗಿದ್ದಾಗ ಬರುವುದು, ಹೋಗುವುದು ಇದ್ದೇ ಇರುತ್ತದೆ. ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ಅಭಿಮಾನಿಗಳು, ಸಾರ್ವಜನಿಕರು ದಯವಿಟ್ಟು ಯಾರೂ ಕಾರ್ಯಕ್ರಮದ ಸ್ಥಳಕ್ಕೆ ಬರಬೇಡಿ. ಕೊರೋನಾ ವೇಳೆ ತೊಂದರೆಗೆ ಸಿಲುಕಿಕೊಳ್ಳುವುದು ಬೇಡ.ಎಲ್ಲಿದ್ದರೂ ನಿಮ್ಮ ಪ್ರೀತಿ ವಿಶ್ವಾಸ ಹೀಗೆ ಇರುತ್ತದೆಂಬ ವಿಶ್ವಾಸವಿದೆ. ಇದು ಅವರದ್ದೇ ಜಾಗ. ಹಾಗಾಗಿ ಅಭಿಮಾನಿಗಳಲ್ಲಿ ಮನವಿ ಮಾಡುತ್ತೇನೆ ಎಂದು ತಿಳಿಸಿದರು.