ಹೊಸ ದಿಗಂತ ವರದಿ, ಮೈಸೂರು:
ಬ್ರಿಟನ್ನಿಂದ ಮೈಸೂರಿಗೆ ಬಂದವರಲ್ಲಿ ಯಾರಿಗೂ ರೂಪಾಂತರಿ ಕೊರೋನಾ ಅಂಟಿಲ್ಲ, ಹಾಗಾಗಿ ಬಿಟ್ರಿನ್ ಹೈಬ್ರಿಡ್ ಕೊರೋನಾ ಸೋಂಕು ಹರಡುವ ಬಗ್ಗೆ ಯಾವುದೇ ಭಯ ಬೇಡಾ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ರೂಪಾಂತರ ಕೊರೋನಾ ಸೋಂಕು ಮೈಸೂರು ಜಿಲ್ಲೆಯಲ್ಲಿ ಯಾರಿಗೂ ಧೃಢವಾಗಿಲ್ಲ
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್ರಿನ್ನಿಂದ ಮೈಸೂರಿಗೆ ಬಂದಿದ್ದ 137 ಮಂದಿಯ ಪೈಕಿ ಒಬ್ಬರಿಗೆ ಕೊರೋನಾ ಪಾಸಿಟಿವ್ ಆಗಿತ್ತು. ಅವರಿಗೂ ರೂಪಾಂತರ ಕೊರೊನಾ ಇಲ್ಲ ಎಂದು ಇಂದು ಬೆಳಗ್ಗೆ ಸರ್ಕಾರದಿಂದ ಅಧಿಕೃತ ಮಾಹಿತಿ ಬಂದಿದೆ. ರೂಪಾಂತರ ಕೊರೋನಾ ಸೋಂಕು ಮೈಸೂರು ಜಿಲ್ಲೆಯಲ್ಲಿ ಯಾರಿಗು ಧೃಢವಾಗಿಲ್ಲ. ಹಾಗಾಗಿ ಮೈಸೂರು ಜಿಲ್ಲೆಗೆ ಬ್ರಿಟನ್ ವೈರಸ್ ಭಯ ಇಲ್ಲ ಎಂದರು.
ಕೊರೋನಾ ಲಸಿಕೆ ಅಭಿಯಾನಕ್ಕೆ ಸಿದ್ಧತೆ
ಕೊರೋನಾ ಲಸಿಕೆ ಅಭಿಯಾನಕ್ಕೆ ಸಿದ್ಧತೆ ಆಗಿದೆ. ಪ್ರಾರಂಭಿಕ ಹಂತದಲ್ಲಿ ಮೈಸೂರಿನ 32 ಸಾವಿರ ಕೊರೋನಾ ವಾರಿಯರ್ಗಳಿಗೆ ಲಸಿಕೆ ಹಾಕುತ್ತೇವೆ. ಕೋವಿಡ್ ಲಸಿಕೆ ಅಭಿಯಾನ ಸಂಬoಧ ಮುಖ್ಯ ಕಾರ್ಯದರ್ಶಿ ಅವರು ವಿಡಿಯೋ ಕಾನ್ಫಿರೆನ್ಸ್ ನಡೆಸಿದ್ದಾರೆ. ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಯಾವ ಲಸಿಕೆ ಕೊಡುತ್ತಾರೆ ಎಂಬುದು ಗೊತ್ತಿಲ್ಲ ಎಂದರು.
ಜಿಲ್ಲಾಡಳಿತದ ವತಿಯಿಂದಲೇ ಲಸಿಕೆ ಸರಬರಾಜು
ಲಸಿಕೆ ನೀಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳೂ ಸೇರಿದಂತೆ 162 ಪಾಯಿಂಟ್ ಮಾಡಿಕೊಂಡಿದ್ದೇವೆ. ಪ್ರತಿ ಕೇಂದ್ರದಲ್ಲಿ 5 ವ್ಯಾಕ್ಸಿನೇಟರ್, ಸ್ಟೋರೇಜ್, ಅಗತ್ಯ ಸೌಕರ್ಯ ಎಲ್ಲವನ್ನೂ ರೆಡಿ ಮಾಡಿಕೊಂಡಿದ್ದೇವೆ. ಕೊರೋನಾ ವಾರಿರ್ಸ್ ಗಳಾಗಿ ಕೆಲಸ ಮಾಡಿದ 15 ಸಾವಿರ ಸರ್ಕಾರಿ ಹಾಗೂ 17 ಸಾವಿರ ಖಾಸಗಿ ಸಿಬ್ಬಂದಿ ಇದ್ದಾರೆ. ಮೊದಲ ಹಂತದಲ್ಲಿ ಇರುವರಿಗೆ ಮಾತ್ರ ವ್ಯಾಕ್ಸಿನೇಷನ್ ಮಾಡುತ್ತೇವೆ. 100ಕ್ಕಿಂತ ಹೆಚ್ಚು ಜನ ಇರುವ ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಡಳಿತದ ವತಿಯಿಂದಲೇ ಲಸಿಕೆ ಸರಬರಾಜು ಮಾಡುತ್ತೇವೆ ಎಂದು ತಿಳಿಸಿದರು.
ಸಾರ್ವಜನಿಕರಿಗೆ ಸದ್ಯಕ್ಕಿಲ್ಲ ಲಸಿಕೆ
ಸಾರ್ವಜನಿಕರಿಗೆ ಸದ್ಯ ಲಸಿಕೆ ಹಾಕುವುದಿಲ್ಲ. ಪ್ರೋಟೊಕಾಲ್ ಪ್ರಕಾರ ಮೊದಲು ಪ್ರೆಂಟ್ ಲೈನ್ ವಾರಿಯರ್ಸ್ ಲಸಿಕೆ ಹಾಕಬೇಕು. ನಂತರ ವಯಸ್ಸಾದವರು. ಇನ್ನೂ ನಾವು ಸಾರ್ವಜನಿಕ ಮಟ್ಟಕ್ಕೆ ಬಂದಿಲ್ಲ. ರಿಜಿಸ್ಟೆಷನ್ ಬಗ್ಗೆ ನಮಗೆ ಮಾಹಿತಿ ಬಂದಿಲ್ಲ ಎಂದರು.