ಯಾದಗಿರಿ: ಬೆಳಿಗೆದ್ದರೆ ಮಧುಮಣೆಗೆ ಏರಬೇಕಿದ್ದ ವಧುವಿನ ತಂದೆ ಹಾಗೂ ತಂಗಿದೆ ಕೊರೋನಾ ವೈರಸ್ ತಗಲಿದ್ದರಿಂದ ಮಧುವೆ ಸಂಭ್ರಮ ಮುಂದೂಡಿದ ಘಟನೆ ಜಿಲ್ಲೆಯ ಅಲ್ಲಿಪೂರ ತಾಂಡಾದಲ್ಲಿ ಜರಗಿದೆ.
ಯಾದಗಿರಿ ತಾಲೂಕಿನ ಅಲ್ಲಿಪೂರತಾಂಡಾದ ಯುವತಿ ಜೊತೆ ನಾಲ್ವಾರತಾಂಡಾದ ಯುವಕನ ನಾಳೆ(ಗುರುವಾರ) ಮದುವೆ ನಿಗಧಿಯಾಗಿತ್ತು. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾರತಾಂಡಾದಲ್ಲಿ ಮದುವೆಗೆ ಸಿದ್ಧತೆ ನಡೆಸಲಾಗಿತ್ತು. ಇನ್ನೇನು ಬೆಳಿಗ್ಗೆ ಎದ್ದರೆ ಮಧುವೆ ಸಂಭ್ರಮದಲ್ಲಿ ಮುಳಗಬೇಕಿದ್ದ ಮನೆಯಲ್ಲಿ ಕೊರೊನಾ ಎಂಬ ಮಾಹಾಮಾರಿ ವಕ್ಕರಿಸಿದ್ದು ಮದುವೆ ಮನೆಯ ಸಂತಸವನ್ನು ಕಿತ್ತುಕೊಂಡಿದೆ. ಈಗ ಮದುವೆ ಮನೆಯಲ್ಲಿ ಆತಂಕದ ಛಾಯೆ ಆವರಿಸಿದೆ. ಅನಿವಾರ್ಯವಾಗಿ ಮದುವೆ ಸಮಾಂಭವನ್ನು ಮುಂದೂಡಲಾಗಿದೆ.
ವಧು ಮತ್ತು ಕುಟುಂಬಸ್ಥರು, ಸದ್ಯ ಆಂಧ್ರಪ್ರದೇಶದ ನೆಲ್ಲೂರನಲ್ಲಿ ವಾಸವಿದ್ದಾರೆ. ಮಗಳ ಮದುವೆ ಮಾಡುವ ಹಿನ್ನೆಲೆ ಈ ಕುಟುಂಬ ಕಳೆದ 10 ದಿನಗಳ ಹಿಂದೆ ಜಿಲ್ಲೆಗೆ ಆಗಮಿಸಿತ್ತು. ಅಂತರ್ ರಾಜ್ಯ ಪ್ರಯಾಣದ ಹಿನ್ನೆಲೆ ಈ ಕುಟುಂಬಸ್ಥರ ಎಲ್ಲರಿಗೂ ಪರೀಕ್ಷೆ ಮಾಡಿ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇವರೆಲ್ಲರನ್ನು ಏಳು ದಿನ ಕ್ವಾರೆಂಟೈನ್ನಲ್ಲಿಟ್ಟು ವರದಿ ಬರುವ ಮುನ್ನವೇ ಮನೆಗೆ ಕಳುಹಿಸಲಾಗಿತ್ತು. ಸದ್ಯ ಇವರ ಫಲಿತಾಂಶ ಹೊರ ಬಿದ್ದಿದ್ದು, ಇದರಲ್ಲಿ ತಂದೆ ಮತ್ತು ಮಗಳಿಗೆ ಕೊರೊನಾ ಪಾಸಿಟಿವ್ ಧೃಡಪಟ್ಟಿದೆ.
ಇದರ ಜೊತೆಗೆ ಅಲ್ಲಿಪೂರತಾಂಡಾದಲ್ಲಿ 11 ಜನರಿಗೆ ಕೊರೊನಾ ಧೃಡಪಟ್ಟಿದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸೋಂಕಿತ 11 ಜನ ವಾಪಸ್ ಕೋವಿಡ್ ಆಸ್ಪತ್ರೆಗೆ ಸೇರಲು ಉದ್ಧಟತನ ತೋರುತ್ತಿದ್ದಾರೆ. ಅಧಿಕಾರಿಗಳು ಇವರನ್ನು ಕರೆತರಲು ಕಳೆದ ರಾತ್ರಿಯಿಂದ ಹರಸಾಹಸ ಪಡುತ್ತಿದ್ದಾರೆ. ವಧುವಿನ ತಂದೆ ಹಾಗೂ ತಂಗಿಗೆ ಕೊರೊನಾ ಪತ್ತೆಯಾಗಿದ್ದು, ಈ ಇಬ್ಬರ ಜೊತೆ ವಧು ಪ್ರಾಥಮಿಕ ಸಂಪರ್ಕ ಹೊಂದಿರುವ ಕಾರಣ, ವಧು ಹಾಗೂ ಕುಟುಂಬಸ್ಥರನ್ನು ಹೋಂ ಕ್ವಾರೆಂಟೈನ್ನಲ್ಲಿ ಇಡಲಾಗಿದೆ ಎಂದು ತಿಳಿದುಬಂದಿದೆ.