ಮಂಡ್ಯ: ಚಿತ್ರನಟಿ ರಾಗಿಣಿ ಮೇಲಿನ ಡ್ರಗ್ಸ್ ಆರೋಪಕ್ಕೂ ಭಾರತೀಯ ಜನತಾ ಪಾರ್ಟಿಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು.
ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡ್ರಗ್ಗಿಸ್ಟ್ಗಳಿಗೂ ಬಿಜೆಪಿಯವರಿಗೂ ಯಾವುದೇ ಸಂಬಂಧವಿಲ್ಲ. ಕಳೆದ ಚುನಾವಣೆ ವೇಳೆ ಚಿತ್ರನಟಿ ರಾಗಿಣಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದು ನಿಜ. ಚಿತ್ರನಟರು ಒಂದೊಂದು ಪಕ್ಷದ ಸ್ಟಾರ್ ಕ್ಯಾಂಪೇನರ್ ಆಗಿರುವುದು ಅಷ್ಟೇ ಸತ್ಯಸಂಗತಿ. ರಾಗಿಣಿ ಬಿಜೆಪಿ ಪರ ಪ್ರಚಾರದಲ್ಲಿ ತೊಡಗಿದ್ದರೆಂಬ ಕಾರಣಕ್ಕೆ ಅವರೊಂದಿಗೆ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಹೇಳಿದರು.
ಡ್ರಗ್ ದಂಧೆಯಲ್ಲಿ ತೊಡಗಿರುವವರೊಂದಿಗೆ ಬಿಜೆಪಿಯ ಯಾವೊಬ್ಬ ನಾಯಕರೂ ಸಂಪರ್ಕ ಹೊಂದಿಲ್ಲ . ಯುವಜನಾಂಗವನ್ನು ಹಾಳು ಮಾಡುತ್ತಿರುವ ಡ್ರಗ್ಸ್ ಜಾಲವನ್ನು ಬೇರು ಸಹಿತ ಕಿತ್ತೊಗೆಯಲು ರಾಜ್ಯಸರ್ಕಾರ ನಿರ್ಧರಿಸಿದೆ. ಈ ದಂಧೆಯಲ್ಲಿ ಭಾಗಿಯಾಗಿರುವ ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಡ್ರಗ್ಸ್ ಜಾಲ ಪಾಕಿಸ್ತಾನ, ಅಪ್ಘಾನಿಸ್ತಾನದಿಂದ ಜಮ್ಮು-ಕಾಶ್ಮೀರ, ಪಂಜಾಬ್ ಮೂಲಕ ದೇಶದ ವಿವಿಧ ರಾಜ್ಯಗಳಿಗೆ ಪೂರೈಕೆಯಾಗುತ್ತಿದೆ. ಇದೊಂದು ದೊಡ್ಡ ಮಾಫಿಯಾ. ಈ ಜಾಲವನ್ನು ಬೇಧಿಸಲು ಸರ್ಕಾರ ಪೆÇಲೀಸರಿಗೆ ಪೂರ್ಣ ಸಹಕಾರ, ಬೆಂಬಲ ನೀಡಿದೆ. ಇದರಲ್ಲಿ ಸಿನಿಮಾನಟರನ್ನಷ್ಟೇ ಟಾರ್ಗೆಟ್ ಮಾಡದೆ ಇತರೆ ಕ್ಷೇತ್ರಗಳಲ್ಲಿರುವವರ ಡ್ರಗ್ಸ್ ದಂಧೆಕೋರರನ್ನು ಬಯಲಿಗೆಳೆಯುವುದಕ್ಕೆ ಪೆÇಲೀಸರಿಗೆ ಅಧಿಕಾರ ನೀಡಲಾಗಿದೆ. ಈ ವಿಷಯದಲ್ಲಿ ಹಿಟ್ ಅಂಡ್ ರನ್ ರೀತಿ ಪಲಾಯನ ಮಾಡುವುದಿಲ್ಲ. ಡ್ರಗ್ಸ್ ಮುಕ್ತ ಕರ್ನಾಟಕ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಇದರಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿದೆ ಎಂದರು.