ನವದೆಹಲಿ: ರಾಜ್ಯಸಭೆ ಉಪ ಸಭಾಪತಿಯಾಗಿ ಜೆಡಿಯು ಸಂಸದ ಹರಿವಂಶ್ ನಾರಾಯಣ್ ಸಿಂಗ್ ಆಯ್ಕೆಯಾಗಿದ್ದಾರೆ. ಧ್ವನಿಮತದ ಮೂಲಕ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ರಾಜ್ಯಸಭೆ ಉಪ ಸಭಾಪತಿಯಾಗಿ ಆಯ್ಕೆ ಮಾಡಲಾಯಿತು.
ರಾಜ್ಯಸಭೆ ಉಪ ಸಭಾಪತಿ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿದ್ದ ಹರಿವಂಶ್ ನಾರಾಯಣ್ ಸಿಂಗ್, ಎರಡನೇ ಬಾರಿ ಈ ಮಹತ್ವದ ಹುದ್ದೆಯನ್ನು ಅಲಂಕರಿಸೀದು, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಹರಿವಂಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹರಿವಂಶ್ ನಾರಾಯಣ್ ಸಿಂಗ್ ರಾಜ್ಯಸಭೆ ಉಪ ಸಭಾಪತಿಯಗಿ ಆಯ್ಕೆಯಾಗಿರುವುದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಅವರೊಬ್ಬ ಅದ್ಭುತ ಸಂಸದೀಯ ಪಟು ಎಂದು ಹೇಳಿದರು.
ರಾಜ್ಯಸಭಾ ಸಂಸದರಾಗಿದ್ದರೂ ಅವರೊಳಗಿನ ಪತ್ರಕರ್ತ ಸದಾ ಜೀವಂತವಾಗಿಯೇ ಇರುತ್ತಾನೆ ಎಂದ ಮೋದಿ, ಸಂಸದರು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಎಂದೂ ಮರೆಯದಂತೆ ಮಾಡಿದ ಹರಿವಂಶ್ ಅವರಿಗೆ ತುಂಬು ಹೃದಯದ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಹರಿವಂಶ್ ನಾರಾಯಣ್ ಸಿಂಗ್ ಅವರ ಬಗ್ಗೆ ನನಗೆಷ್ಟು ಗೌರವ ಇದೆಯೋ ರಾಜ್ಯಸಭೆಯ ಇತರ ಸದಸ್ಯರೂ ಅಷ್ಟೇ ಗೌರವವನ್ನು ಹೊಂದಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸದನದ ಗೌರವವನ್ನು ಸದಾ ಎತ್ತಿ ಹಿಡಿದ ಅವರು ಅನುಕರಣೀಯರು ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ನ ಗುಲಾಂ ನಬಿ ಆಜಾದ್ ಕೂಡ ಹರಿವಂಶ್ ನಾರಾಯಣ್ ಸಿಂಗ್ ಅವರನ್ನು ಅಭಿನಂದಿಸಿದ್ದು, ಎರಡನೇ ಬಾರಿ ಈ ಉನ್ನತ ಹುದ್ದೆ ಅಲಂಕರಿಸಿದ ಹರಿವಂಶ್ ಈ ಸ್ಥಾನಕ್ಕೆ ತಕ್ಕುದಾದ ವ್ಯಕ್ತಿ ಎಂದು ಹೇಳಿದರು.