ಹೊಸದಿಗಂತ ವರದಿ,ಮೈಸೂರು:
ಅಯೋಧ್ಯೆಯಲ್ಲಿ ರಾಮಮಂದಿರದ ಜೊತೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಂದಿರ ಸ್ಥಾಪಿಸುವಂತೆ ಪ್ರಧಾನಮಂತ್ರಿಗಳನ್ನು ಒತ್ತಾಯಿಸಿ ಭಾನುವಾರ ನಗರದಲ್ಲಿ ಅಂಚೆ ಪತ್ರಚಳವಳಿಯನ್ನು ಕರ್ನಾಟಕ ರಾಜ್ಯ ನಾಯಕರ ಹಿತರಕ್ಷಣಾ ವೇದಿಕೆ ವತಿಯಿಂದ ನಡೆಸಲಾಯಿತು.
ಮೈಸೂರು ನಗರಪಾಲಿಕೆ ಮುಂಭಾಗದಲ್ಲಿರುವ ಆಂಚೆಪೆಟ್ಟಿಗೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಕೆಲಕಾಲ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರಧಾನಮಂತ್ರಿಗಳಿಗೆ ಬರೆದ ಪತ್ರಗಳನ್ನು ಅಂಚೆ ಪೆಟ್ಟಿಗೆಗೆ ಹಾಕಿ ಪೋಸ್ಟ್ ಮಾಡಿದರು.
ಶ್ರೀರಾಮನ ಚರಿತ್ರೆಯನ್ನು ಬರೆದು, ಇಡೀ ಜಗತ್ತಿಗೆ ಆ ಮಹಾಕಾವ್ಯವನ್ನು ನೀಡುವ ಮೂಲಕ ಶ್ರೀರಾಮನನ್ನು ಪರಿಚಯಿಸಿಕೊಟ್ಟಿರುವ ಮಹರ್ಷಿ ವಾಲ್ಮೀಕಿ ಅವರ ಮಂದಿರವನ್ನು ಅಯೋಧ್ಯೆಯಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ತಕ್ಷಣವೇ ಕ್ರಮಕೈಗೊಳ್ಳಬೇಕು.
ಶ್ರೀರಾಮಜನ್ಮಭೂಮಿ ಟ್ರಸ್ಟ್ ನವರು ಕೂಡ ಈ ಬಗ್ಗೆ ಕ್ರಮವಹಿಸಿ ವಾಲ್ಮೀಕಿ ಮಂದಿರವನ್ನೂ ನಿರ್ಮಿಸಿ, ಶ್ರೀರಾಮಮಂದಿರದ ಆಕರ್ಷಣೆಯನ್ನ ಮತ್ತಷ್ಟು ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭ ವೇದಿಕೆ ರಾಜ್ಯಾಧ್ಯಕ್ಷ ದ್ಯಾವಪ್ಪನಾಯಕ, ವಕೀಲ ಪಡುವಾರಹಳ್ಳಿ ಎಂ.ರಾಮಕೃಷ್ಣ, ಪ್ರಭಾಕರಹುಣಸೂರು, ನಿಂಗರಾಜು, ಚನ್ನನಾಯಕ, ಮಯೂರ, ರೈಲ್ವೆಸಿದ್ದಯ್ಯ, ಕೆರೆಹಳ್ಳಿಮಾದೇಶ್, ಎಚ್.ಆರ್.ಪ್ರಕಾಶ್, ರಘಯಡಕೂಳ ಇತರರು ಇದ್ದರು.