ಹೊಸದಿಗಂತ ವರದಿ,ಬಳ್ಳಾರಿ:
ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಇದಕ್ಕಾಗಿ ಪ್ರತಿಯೋಬ್ಬರೂ ಸಮರ್ಪಣಾ ಭಾವದಿಂದ ತಮ್ಮ ಕೈಲಾದಷ್ಟು ದೇಣಿಗೆ ನೀಡಿ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಮನವಿ ಮಾಡಿದರು.
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ಹಿನ್ನೆಲೆ ಶನುವಾರ ಹೊಸಪೇಟೆಯಲ್ಲಿ ನಗರದೆಲ್ಲೆಡೆ ದೇಣಿಗೆ ಸಂಗ್ರಹಿಸಿದ ಮಾತನಾಡಿದರು.ಐತಿಹಾಸಿಕ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದರ ಹಿಂದೆ, ನೂರಾರು ವರ್ಷಗಳ ಕನಸು, ಲಕ್ಷಾಂತರ ಜನರ ತ್ಯಾಗ, ಬಲಿದಾನದವಿದೆ. ಇದಕ್ಕಾಗಿ ಸರ್ವರೂ ತಮ್ಮ ಕೈಲಾದಷ್ಟು ದೇಣಿಗೆ ನೀಡುವ ಮೂಲಕ ಅವರ ಶ್ರಮಕ್ಕೆ ಗೌರವ ವಂದನೆ ಸಲ್ಲಿಸಬೇಕಾಗಿದೆ.
ಐತಿಹಾಸಿಕ ಕ್ಷಣದಲ್ಲಿ ಪ್ರತಿಯೊಬ್ಬರು ಭಾಗವಹಿಸಿ: ಈ ಐತಿಹಾಸಿಕ ಕ್ಷಣದಲ್ಲಿ ದೇಶದ ಪ್ರತಿಯೊಬ್ಬರೂ ಭಾಗವಹಿಸಬೇಕೆಂಬ ಆಶಾಭಾವನೆ ನಮ್ಮದು. ನಿಧಿ ಸಂಗ್ರಹ ಅಭಿಯಾನ ಸ್ವಾಭಿಮಾನದ ಸಂಕೇತವಾಗಿದ್ದು, ಎಲ್ಲರೂ ಇದಕ್ಕೆ ಕೈಜೋಡಿಸುವ ಮೂಲಕ ಸಹಕಾರ ನೀಡಬೇಕು. ಸರ್ವರ ಸಮರ್ಪಣಾ ಭಾವದಿಂದ ನೀಡಿದ ದೇಣಿಗೆಯಿಂದ ಭವ್ಯವಾದ ರಾಮಮಂದಿರ ಎದ್ದೇಳಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.
ಸಚಿವರ ಮಕ್ಕಳೂ ಅಭಿಯಾನದಲ್ಲಿ ಭಾಗಿ: ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸಚಿವರು ಸಂಪೂರ್ಣವಾಗಿ ಈ ಜಾಥಾದಲ್ಲಿ ಭಾಗವಹಿಸಿ ನಿಧಿ ಸಂಗ್ರಹಣೆ ಮಾಡಿದರು. ಶನಿವಾರ ನಡೆಸಿದ ಈ ಮಹಾ ಅಭಿಯಾನದಲ್ಲಿ ಸಚಿವರ ಪುತ್ರ ಸಿದ್ಧಾರ್ಥ್ ಸಿಂಗ್ , ಮಗಳು ವೈಷವಿ ಸಿಂಗ್ ಕೂಡ ಭಾಗಿಯಾದರು. ನಗರದ ವಿವಿಧ ಕಡೆ ತೆರಳಿ ಸ್ವತಃ ನಿಧಿ ಸಂಗ್ರಹಿಸಿ ಸಚಿವರು ಗಮನ ಸೆಳೆದರು. ದೇಣಿಗೆ ನೀಡಿದವರಿಗೆ ತಾವೇ ರಶೀದಿ ವಿತರಿಸಿ, ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹೂಡಾ ಅಧ್ಯಕ್ಷ ಅಶೋಕ್ ಜೀರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.