ಹೊಸದಿಗಂತ ವರದಿ, ಮೈಸೂರು
ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುವುದನ್ನು ವಿರೋಧಿಸಿ ಸೋಮವಾರ ನಗರದಲ್ಲಿ ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ರೈಲ್ವೆ ನಿಲ್ದಾಣದ ಬಳಿ ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ನಾನಾ ಘೋಷಣೆಗಳನ್ನು ಕೇಂದ್ರ ಸರ್ಕಾರದ ವಿರುದ್ಧ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುತ್ತಿರುವುದು ಸರಿಯಲ್ಲ, ಸರ್ಕಾರಿ ಸ್ವಾಮ್ಯದಲ್ಲಿಯೇ ಇಲಾಖೆಯನ್ನು ಉಳಿಸಿಕೊಂಡು, ಅದಕ್ಕೆ ಕಾಯಕಲ್ಪ ನೀಡಬೇಕು ಎಂದು ಒತ್ತಾಯಿಸಿದರು.
ಮೈಸೂರು ಹಾಗೂ ಚಾಮರಾಜನಗರ ಪ್ಯಾಸೆಂಜರ್ ರೈಲನ್ನು ಪುನಃ ಪ್ರಾರಂಭಿಸಬೇಕು ಜೊತೆಗೆ ರೈಲ್ವೆ ಪ್ಲ್ಯಾಟ್ ಫಾರ್ಮ್ ದುಬಾರಿ ಟಿಕೆಟ್ ದರ ಹಿಂಪಡೆಯುವoತೆ ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿ ಸದಸ್ಯರಾದ ಎಂ. ಉಮಾದೇವಿ, ಸಂಧ್ಯಾ ಪಿ. ಎಸ್, ಸೀಮಾ ಜಿ. ಎಸ್, ಹರೀಶ್ ಸೇರಿದಂತೆ ಸಮಿತಿ ಸದಸ್ಯರು ಭಾಗವಹಿಸಿದ್ದರು.