ಭಟ್ಕಳ: ಲಾಕ್ಡೌನ್ ಮಧ್ಯೆಯೇ ನೂರಾರು ಜನಕ್ಕೆ ಜ್ವರ ನೆಗಡಿಗೆ ಔಷಧಿ ನೀಡಿ ಈಗ ಕ್ವಾರಂಟೈನ್ನಲ್ಲಿರುವ ಜಾಲಿ ಸಮೀಪದ ಹೋಮಿಯೋಪತಿ ವೈದ್ಯನ ಗಂಟಲ ದ್ರವ ಪರೀಕ್ಷಾ ವರದಿಯತ್ತ ಈಗ ಎಲ್ಲರ ಕುತೂಹಲ ನೆಟ್ಟಿದೆ.
ಈಗಾಗಲೇ ಈ ವೈದ್ಯನನ್ನು ವಶಕ್ಕೆ ಪಡೆದು ಕ್ವಾರಂಟೈನ್ ಮಾಡಲಾಗಿದ್ದು, ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದೆ. ಈ ವರದಿ ಮಂಗಳವಾರ ಬರುವ ನಿರೀಕ್ಷೆಯಿದ್ದು, ಒಂದೊಮ್ಮೆ ಪಾಸಿಟಿವ್ ಬಂದಲ್ಲಿ ಭಟ್ಕಳ ನಗರ ಇನ್ನಷ್ಟು ಕೊರೋನಾ ಪ್ರಕರಣಗಳಿಗೆ ದಾರಿ ಮಾಡಿಕೊಡುವುದರಲ್ಲಿ ಸಂಶಯವಿಲ್ಲ.
ಭಟ್ಕಳ ನಗರ ರೆಡ್ ಝೋನ್ ಆದ ನಂತರದಲ್ಲಿ ಯಾವುದೇ ಖಾಸಗಿ ವೈದ್ಯರುಗಳಿಗೆ ಚಿಕಿತ್ಸೆ ನೀಡದಂತೆ ನಿರ್ಬಂಧ ವಿಧಿಸಲಾಗಿದೆ. ಅದಾಗ್ಯೂ ಈ ವೈದ್ಯ ಲಾಕ್ ಡೌನ್ ಅವಧಿಯಲ್ಲಿ ತಮ್ಮ ಬಳಿ ಜ್ವರ, ನೆಗಡಿ, ಮೈಕೈ ನೋವು, ಕೆಮ್ಮು ಎಂದು ಬಂದಿದ್ದ ನೂರಾರು ಜನಕ್ಕೆ ಔಷಧಿ ನೀಡಿದ್ದು, ಈ ಮಾಹಿತಿಯನ್ನು ತಾಲೂಕು ಆಡಳಿತಕ್ಕೆ ನೀಡದೇ ಮುಚ್ಚಿಟ್ಟಿದ್ದ. ಎರಡು ದಿನಗಳ ಹಿಂದೆ ಜಾಲಿ ಪಂಚಾಯತ್ ಅಧಿಕಾರಿಯೊಬ್ಬರು ಕೆಮ್ಮುತ್ತ ಬರುತ್ತಿದ್ದ ವ್ಯಕ್ತಿಯನ್ನು ತಡೆದು ಪ್ರಶ್ನಿಸಿದಾಗ ಈ ವೈದ್ಯನ ಕರಾಮತ್ತು ಬಹಿರಂಗಕ್ಕೆ ಬಂದಿತ್ತು.
ಈ ಹೋಮಿಯೋಪತಿ ವೈದ್ಯ ಸೋಂಂಕು ಪೀಡಿತನಾದರೆ, ಈತನಿಂದ ಚಿಕಿತ್ಸೆ ಪಡೆದ ನೂರಾರು ಜನರಲ್ಲಿ ಯಾರಿಂದಲಾದರೂ ಈ ವೈದ್ಯ ಸೋಂಕು ಪೀಡಿತನಾಗಿರಬಹುದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಇಲ್ಲಿ ಚಿಕಿತ್ಸೆ ಪಡೆದವರು ಪ್ರಾಥಮಿಕ ಮಾಹಿತಿ ಕಲೆ ಹಾಕುವ ಕಾರ್ಯ ನಡೆದಿದೆ. ವಿನಾಕಾರಣ ಈ ವೈದ್ಯನೂ ಈಗ ಭಟ್ಕಳದ ತಲೆ ಬಿಸಿ ಏರಿಸಿದ್ದು, ಜನ ಚಿಂತಾಕ್ರಾಂತರಾಗಿದ್ದಾರೆ.