ಹೊಸ ದಿಗಂತ ವರದಿ ವಿಜಯಪುರ:
ಕೊರೋನಾ ಸೋಂಕಿನ ಭೀತಿಯಿಂದ ಕಳೆದ 8 ತಿಂಗಳಿಂದ ಜಿಲ್ಲೆಯಲ್ಲಿ ಬಾಗಿಲು ಮುಚ್ಚಿದ್ದ ಕಾಲೇಜುಗಳು ಮಂಗಳವಾರದಿಂದ ಆರಂಭಗೊಂಡಿದ್ದರೂ ವಿದ್ಯಾರ್ಥಿಗಳು ಮಾತ್ರ ಕಾಲೇಜ್ ಕಡೆ ಮುಖಮಾಡುತ್ತಿಲ್ಲ.
ಜಿಲ್ಲೆಯ ಕಾಲೇಜುಗಳಲ್ಲಿ ಸೋಂಕು ಹರಡದಂತೆ ಮುಂಜಾಗೃತಾ ಕ್ರಮವಾಗಿ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಪ್ರತಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಗೆ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದ್ದು, ನೆಗೆಟಿವ್ ವರದಿ ಬಂದವರಿಗೆ ಮಾತ್ರ ತರಗತಿಗಳಿಗೆ ಅವಕಾಶ ನೀಡಲಾಗಿದೆ.
ಆದರೆ ಜಿಲ್ಲಾದ್ಯಂತ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸರ್ಕಾರದ ಕೋವಿಡ್- 19 ನಿಯಮ ಕುರಿತು ಮಾಹಿತಿ ಇಲ್ಲದಂತಾಗಿದೆ. ಅಲ್ಲದೆ ವಿದ್ಯಾರ್ಥಿಗಳ ಹಾಜರಾತಿ ಬೆರಳೆಣಿಕೆಯಷ್ಟಾಗಿದ್ದರಿಂದ, ಒಂದು ಗಂಟೆ ಕಾಲ ಕಾದ ಪ್ರಾಧ್ಯಾಪಕರು ತರಗತಿಯಿಂದಲೇ ಆನ್ ಲೈನ್ ಕ್ಲಾಸ್ ಆರಂಭಿಸಿದ್ದಾರೆ.
ಕೋವಿಡ್ ಕಾರಣದಿಂದಾಗಿ ಹಲವೆಡೆಗಳಲ್ಲಿ ಪೋಷಕರೇ ತಮ್ಮ ಮಕ್ಕಳನ್ನು ಕಾಲೇಜುಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಮತ್ತೆ ಸರ್ಕಾರ ವಿದ್ಯಾರ್ಥಿಗಳಿಗೆ ಮತ್ತ್ಯಾವ ಮಾರ್ಗಸೂಚಿ ಹೊರಡಿಸುತ್ತದೋ ಕಾಯ್ದು ನೋಡಬೇಕು.