ವಿಜಯಪುರ: ಬೈಕ್ಗಳೆರಡು ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕ ಗಲಗಲಿ ಬಳಿ ಬುಧವಾರ ಸಂಭವಿಸಿದೆ.
ಮೃತಪಟ್ಟವರನ್ನು ತೊದಲಬಾಗಿಯ ಲಕ್ಷ್ಮಣ ಮಾದರ, ಕಾಶಿಬಾಯಿ ಮಾದರ ದಂಪತಿ ಹಾಗೂ ಅನಿಲ ರಾಚಣ್ಣ ಮೇಳಗೇರಿ ಎಂದು ಗುರುತಿಸಲಾಗಿದೆ.
ಲಕ್ಷ್ಮಣ ಮಾದರ, ತನ್ನ ಹೆಂಡತಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಾಗ, ಅನಿಲ ಮೇಳಗೇರಿ ಈತನು ಬೈಕ್ನಲ್ಲಿ ಎದುರುಗಡೆಯಿಂದ ಬರುತ್ತಿದ್ದಾಗ ಈ ಅಪಘಾತ ನಡೆದಿದ್ದು, ಮೂವರಿಗು ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಅಸುನೀಗಿದ್ದು, ಹಿಂಬದಿಯ ಸವಾರ ಶಿವಪೂಜಯ್ಯ ಶ್ರೀಶೈಲ ಹಿರೇಮಠ ಗಂಭೀರ ಗಾಯಗೊಂಡಿದ್ದಾನೆ. ಈತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಬಬಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.