ಚಿತ್ರದುರ್ಗ: ಜನರು ಮೂಢ ನಂಬಿಕೆಗಳನ್ನು ಬಿಡಬೇಕು. ಶೋಷಣೆಯಿಂದ ಹೊರ ಬರಬೇಕು. ವಿಜ್ಞಾನದ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ಡಾ.ಹೆಚ್.ಕೆ.ಎಸ್. ಸ್ವಾಮಿ ತಿಳಿಸಿದರು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಚಿತ್ರದುಗ ಹಾಗೂ ವಿಜ್ಞಾನ ಕೇಂದ್ರ ಚಿತ್ರದುರ್ಗ ಇವರು ಸಂಯುಕ್ತವಾಗಿ ನಗರದ ಸರ್ಕಾರಿ ವಿಜ್ಞಾನ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಸೂರ್ಯಗ್ರಹಣ ವೀಕ್ಷಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜ್ಞಾನ ಬೆಳೆಯುತ್ತಿರುವ ಇಂದಿನ ಯುಗದಲ್ಲಿ ಸಹ ಬಹಳಷ್ಟು ದೂರದರ್ಶನ ಚಾನಲ್ಗಳಲ್ಲಿ ಮೂಢನಂಬಿಕೆಗಳನ್ನು ಬಿತ್ತಲಾಗುತ್ತಿದೆ. ಇದರಿಂದ ಮಕ್ಕಳ ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವನೆ ಕಡಿಮೆಯಾಗುತ್ತಾ ಬಂದು, ಶೋಷಣೆಗಳು ಹೆಚ್ಚಾಗುತ್ತಿವೆ ಎಂದರು.
ಈ ಹಿನ್ನೆಲೆಯಲ್ಲಿ ವಿಜ್ಞಾನ ಕೇಂದ್ರಗಳು, ವಿಜ್ಞಾನ ತಿಳಿವಳಿಕೆಯುಳ್ಳವರು ಸಾರ್ವಜನಿಕರ ಬಳಿ ತೆರಳಿ ವಿಜ್ಞಾನದ ಮಹತ್ವವನ್ನು ತಿಳಿಸಿಕೊಡಬೇಕು. ಸಾಮಾನ್ಯ ವಿಜ್ಞಾನಗಳನ್ನು ಜನರಿಂದ ನಾವು ದೂರವಿರಿಸುತ್ತಾ ಬಂದಿರುವುದರ ಪರಿಣಾಮವಾಗಿ ಇಂದು ಸಾಕಷ್ಟು ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ. ಪ್ರತಿದಿನ ನಡೆಯುವಂತಹ ಕಾರ್ಯಗಳಿಗೂ, ಸೂರ್ಯ ಗ್ರಹಣ, ಚಂದ್ರ ಗ್ರಹಣಗಳ ಜೊತೆ ಸಂಬಂಧ ಕಲ್ಪಿಸುವುದರಿಂದ ಜನರ ಮನಸ್ಸಿನಲ್ಲಿ ದ್ವಂದ್ವ ಏರ್ಪಡುತ್ತಿದೆ ಎಂದು ಹೇಳಿದರು.
ಮನುಷ್ಯನ ರೋಗ ರುಜಿನಗಳಿಗೆ, ರಸ್ತೆ ಅಪಘಾತಗಳಿಗೆ, ಪ್ರಕೃತಿ ವಿಕೋಪಗಳಿಗೆ, ನಾವು ಸೂರ್ಯಗ್ರಹಣವನ್ನು ನೆಪವಾಗಿ ಪರಿಗಣಿಸುತ್ತಿದ್ದು, ಇದರಿಂದ ಸಮಾಜದ ಸುಸ್ಥಿತಿಗೆ ತೊಂದರೆಯಾಗುತ್ತಿದೆ. ಜನರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಂಡು, ಎಲ್ಲಾ ಜೀವನದ ಆಗುಹೋಗುಗಳನ್ನು ಧೈರ್ಯವಾಗಿ ಎದುರಿಸುವಂತಾಗಬೇಕು ಎಂದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕ ಡಾ.ಕೆ.ಕೆ.ಕಾಮಾನಿ ಮಾತನಾಡಿ, ಜನಸಾಮಾನ್ಯರಿಗೆ ವಿಜ್ಞಾನದ ಅರಿವನ್ನು ಹೆಚ್ಚಿಸುವುದರಿಂದ ಮೂಢನಂಬಿಕೆಗಳನ್ನು ನಿವಾರಿಸಬಹುದು. ಈ ನಿಟ್ಟಿನಲ್ಲಿ ಇಲ್ಲಿ ಸೂರ್ಯ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುದೆ ಎಂದು ತಿಳಿಸಿದರು. ಗ್ರಹಣದ ಸಮಯದಲ್ಲಿ ಆಹಾರ ವೀಷವಾಗದು ಎಂದು ತಿಳಿಸುವ ಮೂಲಕ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ಬಾಳೆಹಣ್ಣು ಹಾಗೂ ಚಾಕಲೇಟ್ ಹಂಚಿ ಸೇವಿಸಲಾಯಿತು.
ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಕಾರ್ಯದರ್ಶಿ ಕೆ.ಬಿ.ಮಹಂತೇಶ್, ವಿಜ್ಞಾನ ಕೇಂದ್ರದ ಕಾರ್ಯದರ್ಶಿ ನವೀನ್ ಪಿ. ಆಚಾರ್ ಹಾಗೂ ಇನ್ನಿತರ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಗ್ರಹಣ ವೀಕ್ಷಿಸಿದರು.