ಚಾಮರಾಜನಗರ: ಕೇಂದ್ರ ಸರ್ಕಾರ ಅಕ್ಟೋಬರ್ 1ರಿಂದ ಜಾರಿಗೆ ಬರುವಂತೆ ಅನ್ ಲಾಕ್ 5.0 ಮಾರ್ಗಸೂಚಿ ಜಾರಿಗೊಳಿಸಿತ್ತು. ಕೇಂದ್ರ ಸರ್ಕಾರ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಅಕ್ಟೋಬರ್ 15ರಿಂದ ಹಂತ ಹಂತವಾಗಿ ಶಾಲೆಗಳನ್ನು ಆರಂಭಿಸುವಂತೆ ಅವಕಾಶ ನೀಡಿದೆ. ಆದರೆ ಶಿಕ್ಷಣ ಇಲಾಖೆಯಿಂದ ಈ ಬಗ್ಗೆ ಯಾವುದೇ ತೀರ್ಮಾನ ಇನ್ನೂ ಕೈಗೊಂಡಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ತೊಳಸಿಗೆರೆ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ಅವರು , ರಾಜ್ಯದಲ್ಲಿ ಶಾಲೆಗಳ ಆರಂಭದ ಬಗ್ಗೆ ಶಿಕ್ಷಣ ತಜ್ಞರು, ಜನ ಪ್ರತಿನಿಧಿಗಳು, ಪೋಷಕರು, ಶಿಕ್ಷಣ ಸಂಸ್ಥೆಗಳೊಂದಿಗೆ ಚರ್ಚಿಸಲಾಗುತ್ತದೆ. ಅವರು ನೀಡುವ ಅಭಿಪ್ರಾಯಗಳ ತಿಳಿಯಲಾಗುತ್ತದೆ. ಹೀಗೆ ಎಲ್ಲರಿಂದ ಮಾಹಿತಿ ಪಡೆದ ಬಳಿಕ ರಾಜ್ಯದಲ್ಲಿ ಶಾಲೆಗಳನ್ನು ಯಾವಾಗ, ಹೇಗೆ, ಮೊದಲು ಯಾವ ತರಗತಿ ಆರಂಭಿಸಬೇಕು ಎಂಬ ತೀರ್ಮಾನವನ್ನು ಒಂದೇ ವಾರದಲ್ಲಿ ಕೈಗೊಂಡು, ಪ್ರಕಟಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.