ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಶಿರಾ ಹಾಗೂ ಆರ್ಆರ್ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ವಿಜಯೋತ್ಸವ ಆಚರಿಸಿದರು.
ಜಿಲ್ಲಾ ಬಿಜೆಪಿ ಕಚೇರಿ ಪಾಂಚಜನ್ಯದಿಂದ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಜೈಕಾರದ ಘೋಷಣೆಯೊಂದಿಗೆ ಆಜಾದ್ ವೃತ್ತಕ್ಕೆ ಆಗಮಿಸಿ ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.
ಸಿಡಿಎ ಸದಸ್ಯ ಸಮೃದ್ ಪೈ ಮಾತನಾಡಿ, ಮಿನಿ ಕುರುಕ್ಷೇತ್ರವಾದ ಆರ್ಆರ್ ನಗರ ಹಾಗೂ ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ದೇಶದಲ್ಲಿ 40ಕ್ಕೂ ಹೆಚ್ಚುಕಡೆ ಬಿಜೆಪಿ ಉಪಚುನಾವಣೆಯಲ್ಲಿ ಗೆದ್ದಿದೆ. ಕಾರ್ಯಕರ್ತರ ಶ್ರಮದಿಂದ ಈ ಗೆಲವು ಸಾಧ್ಯವಾಗಿದೆ. ಬಿಹಾರದಲ್ಲಿ ಜನ ಅಭೂತಪೂರ್ವವಾಗಿ ಬೆಂಬಲಿಸಿದ್ದು ಅಧಿಕಾರಿ ಹಿಡಿಯಲಿದೆ ಎಂದರು.
ಪಕ್ಷದ ಮುಖಂಡ ಸೀತಾರಾಂ ಭರಣ್ಯ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ತಂಡ ದೇಶಾದ್ಯಂತ ಮಾಡಿರುವ ಅಭಿವೃದ್ದಿ ಕಾರ್ಯಗಳಿಗೆ ಮತದಾರ ತೀರ್ಪು ನೀಡಿದ್ದಾನೆ. ಬಿಹಾರದಲ್ಲಿ ಮುನ್ನಡೆ ಸಾಧಿಸಲು ಆಶೀರ್ವಾದ ಮಾಡಿದ್ದಾರೆ ಎಂದರು.
ಕರ್ನಾಟಕ ಹಾಗೂ ಗುಜರಾತ್ನಲ್ಲಿ ಕ್ಲೀನ್ಸ್ವೀಪ್ ಮಾಡಿದೆ ಮಧ್ಯಪ್ರದೇಶ ಉತ್ತರ ಪ್ರದೇಶದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಸಂಘಟನಾತ್ಮಕವಾಗಿ ಇನ್ನಷ್ಟು ಗಟ್ಟಿಗೊಳಿಸುವ ಕಾರ್ಯಕ್ಕೆ ಮುಂದಾಗಿ ಜನತೆ ಬಿಜೆಪಿ ಮೇಲಿಟ್ಟಿರುವ ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡಲು ಬದ್ದರಿದ್ದೇವೆ ಎಂದರು.
ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ನಗರ ಯುವ ಮೋರ್ಚಾ ಅಧ್ಯಕ್ಷ ಕಿರಣ್, ತಾಪಂ ಅಧ್ಯಕ್ಷೆ ದಾಕ್ಷಾಯಿಣಿ ಪೂರ್ಣೆಶ್ ಸದಸ್ಯರಾದ ಜಯ್ಯಣ್ಣ, ಜಗನ್ನಾಥ್, ಬಸವರಾಜ್, ಎಸ್ಡಿಎಂ ಮಂಜು, ಹಿರೇಮಗಳೂರು ಕೇಶವ ಇತರರು ಇದ್ದರು.