ಶಿವಮೊಗ್ಗ: ಸೊರಬ ತಾಲ್ಲೂಕಿನ ಕಂಟೈನ್ಮೆಂಟ್ ಝೋನ್ನಲ್ಲಿ ಸಂಕಷ್ಟದಲ್ಲಿರುವ ಕುಟುಂಬಗಳ ಸಹಾಯಕ್ಕೆ ಮುಂದಾದ ನನ್ನನ್ನು ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಪೊಲೀಸರನ್ನು ಮುಂದೆ ಬಿಟ್ಟು ಬಂಧಿಸುವ ಪಿತೂರಿ ನಡೆಸಿದ ಕ್ರಮ ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಡಾ. ರಾಜು ಎಂ. ತಲ್ಲೂರು ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ರವಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ಸ್ವಂತ ದುಡಿಮೆಯ ಹಣದಲ್ಲಿ ಹಳೇಸೊರಬ ಗ್ರಾಮಸ್ಥರಿಗೆ ಸಹಾಯ ಮಾಡುವುದನ್ನು ಸಹಿಸದೆ ನನ್ನನ್ನು ಸೊರಬ-ಹಳೇಸೊರಬ-ಆನವಟ್ಟಿ ಮಾರ್ಗದ ರಸ್ತೆಯಲ್ಲೂ ಸಹ ಸಂಚರಿಸುವುದಕ್ಕೆ ಪೊಲೀಸ್ ಅಧಿಕಾರಿಗಳನ್ನು ಮುಂದೆಬಿಟ್ಟು ಅಡ್ಡಿಪಡಿಸಿದ್ದಾರೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಕಲ್ಲಪ್ಪ ಚಿತ್ರಟ್ಟಹಳ್ಳಿ, ತಾಲ್ಲೂಕು ಕಾರ್ಯದರ್ಶಿ ಜಿ. ಕೆರಿಯಪ್ಪ, ಪ್ರಮುಖರಾದ ಹುಚ್ಚರಾಯಪ್ಪ ಕುಂದಗಸವಿ, ಹಿರಣ್ಯಪ್ಪ ಕುಂಬ್ರಿ, ನೆಮ್ಮದಿ ಸುಬ್ರಹ್ಮಣ್ಯ, ಇರ್ಫಾನ್, ನೆಮ್ಮದಿ ಶ್ರೀಧರ್, ಇತರಿದ್ದರು.
ಸಹೋದರರ ಕಾದಾಟದಲ್ಲಿ ಜನತೆಗೆ ಸಂಕಷ್ಟ
ಕ್ಷೇತ್ರದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ಹಾಗೂ ಮಾಜಿ ಶಾಸಕ ಮಧು ಬಂಗಾರಪ್ಪ ಸಹೋದರರ ರಾಜಕೀಯ ಕಾದಾಟದಿಂದ ಜನತೆ ಸಂಕಷ್ಟ ಎದುರಿಸುವಂತಾಗಿದೆ. ಸರ್ವೆ ನಂ. 113ರಲ್ಲಿನ ಕೆಲವರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲು ಹೋಗಿ ಶಾಸಕರು ಬಡವರಿಗೆ ಆತಂಕವನ್ನುಂಟು ಮಾಡಿದ್ದಾರೆ. ಈ ಹಿಂದೆ ಮಧು ಬಂಗಾರಪ್ಪ ಶಾಸಕರಾಗಿದ್ದಾಗ ಮೌನವಾಗಿದ್ದ ಕುಮಾರ್ ಈಗ ಶಾಸಕರಾಗಿ ಕಾನಕೇರಿಯ ವಿಷಯದಲ್ಲಿ ಮತ್ತೆ ಕ್ಯಾತೆ ತಗೆದಿದ್ದಾರೆ. ಸ್ಥಳೀಯ ಮಾಧ್ಯಮದವರ ಮುಂದೆ ಮಾತನಾಡುವ ನೈತಿಕತೆ ಇಲ್ಲದೇ, ಜಿಲ್ಲಾ ಕೇಂದ್ರದಲ್ಲಿ ಕುಳಿತು ಸುದ್ದಿಗೋಷ್ಠಿ ನಡೆಸುವುದು. ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದು ಇವರ ಕಾಯಕವಾಗಿದೆ ಎಂದು ರಾಜು ತಲ್ಲೂರು ದೂರಿದಿದರು.