ಉಡುಪಿ: ಕೋವಿಡ್ ವಿಪತ್ತಿನಿಂದ ದೇಶದ ನೂರಾರು ಗೋಶಾಲೆಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು, ತುರ್ತಾಗಿ ಕನಿಷ್ಠ 200 ಕೋಟಿ ರೂ.ಗಳ ನಿರ್ವಹಣಾ ನಿಧಿ ನೀಡಲು ಒತ್ತಾಯಿಸಿ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದಾರೆ.
ಕಳೆದ ಆರೇಳು ತಿಂಗಳುಗಳಿಂದ ಕೊರೋನಾದಿಂದಾಗಿ ವಿವಿಧ ಕ್ಷೇತ್ರಗಳು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಂತೆಯೇ ದೇಶದ ಗೋಶಾಲೆಗಳೂ ತೊಂದರೆಗೊಳಗಾಗಿವೆ. ಗೋಶಾಲೆಗಳ ನಿರ್ವಹಣೆ ಅತೀ ವೆಚ್ಚದಾಯಕವಾಗಿದೆ. ಉಡುಪಿ ಪೇಜಾವರ ಮಠದ ಅಧೀನ ವಿವಿಧ ಟ್ರಸ್ಟ್ಗಳಿಂದ ನೀಲಾವರ, ಕೊಡವೂರು ಮತ್ತು ಹೆಬ್ರಿಯಲ್ಲಿ ನಡೆಯುವ ಗೋಶಾಲೆಗಳಿಗೆ ಮಾಸಿಕ ಅಂದಾಜು 35 ಲಕ್ಷ ರೂ. ನಿರ್ವಹಣಾ ವೆಚ್ಚ ಬರುತ್ತಿದೆ.
ಇದೇ ರೀತಿ ನಾಡಿನಲ್ಲಿ ಇದಕ್ಕೂ ದೊಡ್ಡ-ಸಣ್ಣ ಮಟ್ಟದ ಗೋಶಾಲೆಗಳನ್ನು ಅನೇಕ ಮಠ, ದೇವಳ ಹಾಗೂ ಮಹನೀಯರು ಯಾವುದೇ ಪ್ರತಿಲಾಪೇಕ್ಷೆಯಿಲ್ಲದೆ ನಡೆಸುತ್ತಿದ್ದಾರೆ. ಇಂತಹ ಗೋಶಾಲೆಗಳಲ್ಲಿ ಲಕ್ಷಾಂತರ ಗೋವುಗಳನ್ನು ಪೋಷಿಸಲಾಗುತ್ತಿದೆ. ಧರ್ಮಾಭಿಮಾನಿಗಳ ಸಹಕಾರದಿಂದ ಇದು ಸಾಧ್ಯವಾಗುತ್ತಿತ್ತು. ಆದರೆ ಪ್ರಸ್ತುತ ಭಕ್ತರ ದೇಣಿಗೆ ಅಷ್ಟಾಗಿ ಇಲ್ಲದಿರುವುದರಿಂದ ಹಾಗೂ ಕೆಲವೆಡೆ ವಿಪರೀತ ಮಳೆಯಿಂದ ಮೇವಿನ ಸಂಗ್ರಹಣೆಯೂ ದುಸ್ತರವಾಗುತ್ತಿದೆ.
ಆದ್ದರಿಂದ ಕೋವಿಡ್ ವಿಪತ್ತನ್ನು ಎದುರಿಸಲು ಬೇರೆ ಬೇರೆ ಕ್ಷೇತ್ರಗಳಿಗೆ ಸರಕಾರವು ಆರ್ಥಿಕ ಪ್ಯಾಕೇಜ್ ಘೋಷಿಸಿದಂತೆ ಗೋಶಾಲೆಗಳಿಗೂ ಕನಿಷ್ಠ 200 ಕೋಟಿ ರೂ.ಗಳನ್ನು ತುರ್ತಾಗಿ ನೀಡಿ ಗೋರಕ್ಷಣೆಯ ಕೈಂಕರ್ಯದಲ್ಲಿ ಕೈಜೋಡಿಸಬೇಕು. ಕೇವಲ ಧರ್ಮ ಮಾತ್ರವಲ್ಲದೇ ಆರ್ಥಿಕತೆಯ ಹಿತದೃಷ್ಟಿಯಿಂದಲೂ ಗೋರಕ್ಷಣೆಯನ್ನು ಆದ್ಯತೆಯಾಗಿ ಪರಿಗಣಿಸಬೇಕೆಂದು ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಪತ್ರದಲ್ಲಿ ವಿವರಿಸಿದ್ದಾರೆ.
ಪೇಜಾವರ ಶ್ರೀಗಳು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಳುಹಿಸಿರುವ ಪತ್ರದ ಪ್ರತಿಯನ್ನು ಮುಖ್ಯಮಂತ್ರಿಗಳು, ರಾಜ್ಯದಲ್ಲಿರುವ ಕೇಂದ್ರ ಸಚಿವರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯೆ, ಶಾಸಕರು, ಜಿಲ್ಲಾಧಿಕಾರಿಗಳಿಗೂ ಕಳುಹಿಸಲಾಗಿದೆ.