ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಭೂಮಿಪುತ್ರರಾದ ಮೊಗೇರ ಸಮಾಜದಿಂದ ಸಚಿವರಾಗಿ ಕರ್ನಾಟಕ ವಿಧಾನಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡ ಎಸ್.ಅಂಗಾರ ಅವರಿಗೆ ಮಧೂರು ಶ್ರೀ ಮದರು ಮಹಾಮಾತೆ ಮೊಗೇರ ಸಮಾಜದ ವತಿಯಿಂದ ಗೌರವಾಭಿನಂದನೆ ನೀಡಲಾಯಿತು.
ಸುಬ್ರಹ್ಮಣ್ಯ ಕ್ಷೇತ್ರದ ಅತಿಥಿಗೃಹದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ವಸಂತ ಅಜಕ್ಕೋಡು ಹೂ ಗುಚ್ಛ ನೀಡಿ ಶಾಲು ಹೊದಿಸಿ ಅಭಿನಂದಿಸಿದರು. ಗೌರವ ಸಲಹೆಗಾರ ರಾಮಪ್ಪ ಮಂಜೇಶ್ವರ, ಪ್ರಧಾನ ಕಾರ್ಯದರ್ಶಿ ಡಿ.ಶಂಕರ ದರ್ಭೆತ್ತಡ್ಕ, ಉಪಾಧ್ಯಕ್ಷ ಸುರೇಶ್ ಅಜಕ್ಕೋಡು, ಸಾಂಸ್ಕೃತಿಕ ಸಂಚಾಲಕ ರಾಮಪಟ್ಟಾಜೆ, ರವಿ ದರ್ಬೆತ್ತಡ್ಕ ಮೊದಲಾದವರು ಜೊತೆಗಿದ್ದರು.
ತನ್ನದೇ ಸಮುದಾಯದ ವತಿಯಿಂದ ಮೊದಲ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಸಚಿವರು ಉತ್ತರ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಹುಸಂಖ್ಯಾತರಾದ ಮೂಲನಿವಾಸಿ ಮೊಗೇರರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ತಿಳಿಸಿದು. ಮಧೂರು ದೇವಸ್ಥಾನದ ಮೂಲಸ್ಥಾನ ಅಭಿವೃದ್ಧಿಯ ಕುರಿತು ವಸಂತ ಅಜಕ್ಕೋಡು ವಿವರಣೆ ನೀಡಿದರು. ಮದರುವಿಗೆ ಸ್ಥಾನಮಾನ ಕಲ್ಪಿಸಲು ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಮದರು ಮಹಾಮಾತೆ ಮೊಗೇರ ಸಮಾಜದ ಚಟುವಟಿಕೆಗಳನ್ನು ಸಚಿವರು ಶ್ಲಾಘಿಸಿದರು.