ಹೊಸ ದಿಗಂತ ವರದಿ, ಬಳ್ಳಾರಿ:
ಬಿಜೆಪಿ ಸರ್ಕಾರ ರಚನೆಗೆ ಕಾರಣರಾದವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಚಿವ ಸ್ಥಾನ ನೀಡಲಾಗುವುದು ಎಂದು ಮಾತು ಕೊಟ್ಟಿದ್ದರು. ಅದರಂತೆ ಅವರು ನಡೆದುಕೊಳ್ಳುತ್ತಾರೆ, ಇದರಲ್ಲಿ ಅನುಮಾನ ಬೇಡ ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ಹೊಸಪೇಟೆ ನಗರದ ಬಿಜೆಪಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು,
ಸರ್ಕಾರ ರಚನೆಗೆ ಕಾರಣರಾದವರಿಗೆ ಸಚಿವ ಸ್ಥಾನ ಸಿಗಬಹುದು. ಈ ಕುರಿತು ಸಿ.ಎಂ. ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಅದರಂತೆ ಇಲ್ಲಿವರೆಗೂ ನಡೆದುಕೊಂಡಿದ್ದು, ಬರುವ ದಿನಗಳಲ್ಲಿ ಸರ್ಕಾರ ರಚನೆಗೆ ಕಾರಣರಾದವರಿಗೆ ಸ್ಥಾನ ಮಾನ ದೊರೆಯಲಿದೆ, ಇದರಲ್ಲಿ ಅನುಮಾನಬೇಡ. ಈಗಾಗಲೇ ಮಾತು ಕೊಟ್ಟಂತೆ ಅವರು ನಡೆದುಕೊಂಡಿದ್ದಾರೆ.
ಸಿಎಂ ಅವರು ಮಾತು ಕೊಟ್ಟಂತೆ ನಡೆದುಕೊಳ್ಳುತ್ತಾರೆ ಎನ್ನುವುದಕ್ಕೆ ನಾನೇ ಸಾಕ್ಷಿಯಾಗಿರುವೆ. ಇದಕ್ಕೆ ವಿಜಯನಗರ ನೂತನ ಜಿಲ್ಲೆಗೆ ರಚನೆ ಮಾಡಿರುವುದೇ ಉತ್ತಮ ಉದಾಹರಣೆಯಾಗಿದೆ. ಬಹಿರಂಗವಾಗಿ ವಿಜಯನಗರ ಜಿಲ್ಲೆ ರಚನೆ ಕುರಿತು ಹೇಳಿಕೆಯನ್ನು ನೀಡಿರಲಿಲ್ಲ. ಆದರೂ ಸಿ.ಎಂ.ಯಡಿಯೂರಪ್ಪ ಅವರು ನೂತನ ವಿಜಯನಗರ ಜಿಲ್ಲೆ ಘೋಷಣೆ ಮಾಡಿದರು, ಇದಕ್ಕೆ ಅವರಿಗೆ ಹಾಗು ಸಂಪುಟದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವೆ ಎಂದರು. ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ಸಹ ನೀಡಲಿದ್ದಾರೆ, ಸಂಪುಟ ರಚನೆ ಮಾಡುತ್ತಾರೊ ಅಥವಾ ವಿಸ್ತರಣೆ ಮಾಡುತ್ತಾರೋ ಎಂಬುದು ತಿಳಿದಿಲ್ಲ. ಸಚಿವ ಸ್ಥಾನ ತ್ಯಜಿಸಲು ಈಗಲು ನಾನು ಸಿದ್ಧನಿರುವೆ ಎಂದು ನಗುತ್ತಾ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಪಾಟಿಲ್ ಸೇರಿದಂತೆ ವಿವಿಧ ಮುಖಂಡರು ಇತರರು ಉಪಸ್ಥಿತರಿದ್ದರು.