ಹೊಸ ದಿಗಂತ ವರದಿ, ವಿಜಯಪುರ:
ತಾಲೂಕಿನ ಕನ್ನಾಳ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಬಳಿ ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಇಂಡಿ ರೋಡ್ ಬಂಬಳ ಅಗಸಿಯ ಮಹೇಶ ಅರ್ಜುನ ಸಾಳುಂಕೆ (26), ಹೆಗಡಿಹಾಳ ಮೂಲದ ಹಾಲಿ ವಜ್ರ ಹನುಮಾನ ರೇಲ್ವೆ ಗೇಟ್ ಬಳಿಯ ಬಾಬು ನಿಂಗನಗೌಡ ಬಿರಾದಾರ (23) ಬಂಧಿತ ಆರೋಪಿಗಳು.
ಈ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ, ಆಟೋ ರಿಕ್ಷಾ, ಒಂದು ಮೊಬೈಲ್, ತಲವಾರ ಅನ್ನು ಜಪ್ತಿ ಮಾಡಲಾಗಿದೆ.
ಮಹಾದೇವ ಸಾಹುಕಾರ ಭೈರಗೊಂಡ ಕಾರಿಗೆ ನ.2 ರಂದು ಟಿಪ್ಪರ್ ಡಿಕ್ಕಿ ಪಡೆಸಿ, ಗುಂಡಿನ ದಾಳಿ ಮಾಡಲಾಗಿತ್ತು. ಈ ಘಟನೆಯಲ್ಲಿ ಭೈರಗೊಂಡ ಸಹಚರ ಹಾಗೂ ಕಾರು ಚಾಲಕ ಸೇರಿ ಇಬ್ಬರು ಮೃತಪಟ್ಟಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 21 ಜನರನ್ನು ಬಂಧಿಸಲಾಗಿದ್ದು, ಮತ್ತೆ 2 ಜನ ಸೇರಿದಂತೆ ಇಲ್ಲಿವರೆಗೆ ಒಟ್ಟು 23 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.