ಕೊಪ್ಪಳ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಯ ಹುಟ್ಟಿಸುವ ಭಯೋತ್ಪಾದಕರ ಪರವಾಗಿಯೊ? ದಲಿತರ ಪರವಾಗಿಯೊ? ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಂತೆ ಸಿದ್ದರಾಮ್ಯ ಅವರು ನೀಡಿದ ಹೇಳಿಕೆಗೆ ಸಂಭಂಧಪಟ್ಟಂತೆ ಪ್ರತಿಕ್ರಿಯೆ ನೀಡಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆಯಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಓಲೈಕೆ ರಾಜಕೀಯ ಮಾಡಿದ್ದರಿಂದಲೇ ಬೆಂಗಳೂರಿನ ಘಟನೆ ನಡೆದಿದೆ. ಕೋಮು ಗಲಭೆ ನಡೆದ ವೇಳೆಯಲ್ಲಿ ಹತ್ತಿಕ್ಕಲು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಹಿಂದೂಗಳ ಹತ್ಯೆ ನಡೆದ ವೇಳೆಯಲ್ಲಿ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಸಿದ್ದರಾಮಯ್ಯನವರೇ ಗಲಾಟೆಗೆ ನೇರ ಕಾರಣ ಎಂದು ಹೇಳುವುದಿಲ್ಲ. ಆದರೆ ಸಿಎಂ ಆಗಿದ್ದಾಗ ಕಠಿಣ ಕಾನೂನು ಕ್ರಮ ಕೈಗೊಳ್ಳದಿರುವುದರಿಂದ ಈ ಜನರಿಗೆ ಧೈರ್ಯ ಬಂದಿದೆ ಎಂದರು.
ಕಾಂಗ್ರೆಸ್ ನ ಓಲೈಕೆ ರಾಜಕಾರಣದಿಂದಲೇ ಈ ಜನರು ಬೆಳೆಯುತ್ತಿದ್ದಾರೆ. ಪೊಲೀಸರು, ಮಾಧ್ಯಮದವರಿಗೆ, ಸಾರ್ವಜನಿಕರಿಗೆ ಹಾಗೂ ಜನಪ್ರತಿನಿಧಿಗಳಲ್ಲಿ ಭಯ ಸೃಷ್ಟಿಸುತ್ತಿದ್ದಾರೆ. ಭಯ ಸೃಷ್ಟಿಸುತ್ತಿರುವ ಭಯೋತ್ಪಾದಕರ ಪರವಾಗಿ ನಿಲ್ಲುತ್ತೀರೊ? ದಲಿತ, ಸಜ್ಜನ ಶಾಸಕರ ಪರವಾಗಿ ನಿಲ್ಲುತ್ತೀರಾ ಎನ್ನುವುದನ್ನು ಸಿದ್ದರಾಮಯ್ಯನವರೇ ಹೇಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಪರಣ್ಣ ಮುನವಳ್ಳಿ, ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ.ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.