ಹೊಸ ದಿಗಂತ ವರದಿ ಬಾಗಲಕೋಟೆ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನಸು ಮನಸ್ಸಿನಲ್ಲಿಯೂ ಮುಖ್ಯಮಂತ್ರಿ ಖುರ್ಚಿ ಅಲಂಕರಿಸುವುದಿಲ್ಲ, ಅವರ ಮುಖ್ಯಮಂತ್ರಿ ಆಗುವ ಕನಸು ನನಸಾಗುವುದಿಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಇಲ್ಲಿಯ ನವನಗರದಲ್ಲಿ ರಂಗನಾಥ ಟೆಕ್ಸಟೈಲ್ ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲೇ ಒಡಕು ಜಾಸ್ತಿ ಇದೆ. ಆದರೆ ಸಿದ್ದರಾಮಯ್ಯನವರು ಸಂಕ್ರಾಂತಿ ನಂತರ ಯಡಿಯೂರಪ್ಪನವರು ಮುಖ್ಯಮಂತ್ರಿ ಖುರ್ಚಿಯಿಂದ ಕೆಳಗೆ ಇಳಿಯುತ್ತಾರೆಂದು ಹೇಳುವ ಭವಿಷ್ಯ ಸುಳ್ಳಾಗಲಿದೆ ಎಂದರು.
ಯಡಿಯೂರಪ್ಪನವರು ಪೂರ್ಣ ಪ್ರಮಾಣದ ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ.ಸಿದ್ದರಾಮಯ್ಯನವರು ಕನಸು ಕಾಣುವುದನ್ನು ಬಿಡಬೇಕು ಎಂದರು.
ಬಾದಾಮಿಯಲ್ಲಿ ಮತ್ತೆ ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ.ರಾಮುಲು ಬಾದಾಮಿ ಸ್ಪರ್ಧೆ ಮಾಡಬೇಕು ಅಂದ್ರೆ ಎಂತಹ ಸಂದರ್ಭದಲ್ಲೂ ಸ್ಪರ್ಧೆ ಮಾಡೋಣ ಅದರಲ್ಲಿ ತಪ್ಪೇನಿದೆ? ಬಾದಾಮಿಯಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದ್ರೆ ಪಕ್ಷ ಒಪ್ಪಿದ್ರೆ ಅವರ ವಿರುದ್ದ ಸ್ಪರ್ಧಿಸಲು ಸೈ ಎಂದು ಶ್ರೀರಾಮುಲು ಹೇಳಿದರು.
ರಾಮುಲು ಡಿಸಿಎಂ ಆಗಬೇಕು ಅನ್ನೋದು ಇಡೀ ರಾಜ್ಯದ ಆಶಯವಾಗಿದೆ. ನಮ್ಮ ನಾಯಕರು ಸೇರಿ ತೀರ್ಮಾನ ತೆಗೆದುಕೊಳ್ತಾರೆ ಎಂದ ಅವರು ರಾಮುಲು ಇವತ್ತಿನ ನಾಯಕರು ಅಲ್ಲ.ಕೆಳಮಟ್ಟದಿಂದ ರಾಜಕಾರಣ ಮಾಡಿಕೊಂಡು ಈ ಸ್ಥಾನಕ್ಕೆ ಬಂದಿದ್ದೇನೆ. ರಾಮುಲು ಜನಮತದಿಂದ ಬಂದ ಒಬ್ಬ ನಾಯಕನಾಗಿ ಬೆಳೆದುಕೊಂಡು ಬಂದಿದ್ದೇನೆ. ಇವತ್ತು ನನ್ನ ಜನಪ್ರಿಯತೆಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.ರಮೇಶ ಜಾರಕಿಹೊಳಿ ಬಿಜೆಪಿಗೆ ಬಂದ ಬಳಿಕ ಪಕ್ಷದಲ್ಲಿ ಶ್ರೀರಾಮುಲು ಸೈಡ್ ಲೈನ್ ಆಗ್ತಿದ್ದಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ರಾಮುಲು ಉತ್ತರಿಸಿದರು.