ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಸೊರಬ ತಾಲ್ಲೂಕಿನ ಹಳೇಸೊರಬ ಗ್ರಾಮದ ಕೆರೆ ಏರಿ ಸಮೀಪ ಸಂಭವಿಸಿದೆ.
ಶಿರಶಿಯ ಸಾಫ್ಟವೇರ್ ಕಂಪನಿಯ ಉದ್ಯೋಗಿ ಸಂತೋಷ್ (37) ಮೃತ ದುರ್ಧೈವಿ ಎಂದು ತಿಳಿದು ಬಂದಿದೆ. ತವನಂದಿ ಮಾರ್ಗವಾಗಿ ಆಗಮಿಸುತ್ತಿದ್ದಾಗ ಚಾಲಕನ ಅಜಾಗರೂಕತೆಯಿಂದ ಅಪಘಾತಕ್ಕೀಡಾಗಿದೆ. ಕಾರು ಚಾಲಕ ರಾಘವ(25) ಹಾಗೂ ಗಣಪತಿ (27) ಎಂಬುವರಿಗೆ ತೀವ್ರ ಗಾಯವಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿರಸಿಗೆ ರವಾನಿಸಲಾಗಿದೆ.
ಸ್ಥಳಕ್ಕೆ ಸಿಪಿಐ ಆರ್.ಡಿ.ಮರಳು ಸಿದ್ದಪ್ಪ, ಪಿಎಸ್ಐ ಟಿ.ಬಿ. ಪ್ರಶಾಂತ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ವಲಯ ಘೋಷಣೆಗೆ ಆಗ್ರಹ
ಕಳೆದ ಎರಡು ವರ್ಷದಿಂದ ಇದೇ ಸ್ಥಳದಲ್ಲಿ ಅಪಘಾತ ಸಂಭವಿಸುತ್ತಿದೆ. ಕಳೆದ ವರ್ಷ ಬೈಕ್ ಅಪಘಾತವಾಗಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದ. ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಇತ್ತಿಚೆಗೆ ರಸ್ತೆ ದುರಸ್ತಿಗೊಳಿಸಿ ಅಭಿವೃದ್ದಿಗೊಳಿಸಲಾಗಿದೆ. ಇದರಿಂದ ವಾಹನ ಸವಾರರು ವೇಗವಾಗಿ ವಾಹನ ಚಲಾಯಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಸ್ತೆಯಲ್ಲಿ ಸಾಧ್ಯವಾದರೆ ಹಂಪ್ಸ್ ನಿರ್ಮಿಸಬೇಕು ಹಾಗೂ ಅಪಘಾತ ವಲಯ ಎಂಬ ಎಚ್ಚರಿಕೆಯ ಸಂದೇಶಗಳ ಫಲಕ ಅಳವಡಿಸಬೇಕು ಎಂದು ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ಆಗ್ರಹಿಸಿದ್ದಾರೆ.