ಧಾರವಾಡ: ನಗರದ ಹಿರಿಯ ವೈದ್ಯ, ನಿವೃತ್ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿ.ಡಿ.ಕರ್ಪೂರಮಠ (80) ಶನಿವಾರ ಹುಬ್ಬಳ್ಳಿ ನವನಗರದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೂಲತಃ ವಿಜಾಪುರ ಜಿಲ್ಲೆಯ ಇವರು ಆರೋಗ್ಯ-ಕುಟುಂಬ ಕಲ್ಯಾಣ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿ ನಿವೃತ್ತರಾಗಿದ್ದರು.
ನಿವೃತ್ತಿಯ ನಂತರವೂ ಕ್ಯಾನ್ಸರ್ ರೋಗಿಗಳ, ಎಚ್.ಐವಿ-ಏಡ್ಸ್ ಸೋಂಕಿತರ ತಪಾಸಣೆ, ಆರೋಗ್ಯ ಕಾಳಜಿ, ರಕ್ತದಾನ ಶಿಬಿರ ಹೀಗೆ ಕೊನೆಯ ಉಸಿರಿರುವರೆಗೂ ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಮೃತರಿಗೆ ಪತ್ನಿ ಡಾ.ಸುಲೋಚನಾ, ಪುತ್ರರಾದ ವಿವೇಕ್ ಹಾಗೂ ಕ್ಯಾನ್ಸರ್ ತಜ್ಞ ಡಾ.ಡಾ.ಶಶಿ ಕರ್ಪೂರಮಠ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಸಚಿವರ ಸಂತಾಪ:
ಡಾ.ವಿ.ಡಿ.ಕರ್ಪೂರಮಠ ಅವರ ನಿಧನಕ್ಕೆ ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಸಾರ್ಥಕ ಬದುಕು ಮತ್ತು ಸೇವಾ ಮನೋಭಾವವನ್ನು ಸ್ಮರಿಸಿದ್ದಾರೆ.