ಬೆಳಗಾವಿ: ಹುಕ್ಕೇರಿ ಶಾಸಕ ಉಮೇಶ ಕತ್ತಿ ಯಾವುದೇ ಬಂಡಾಯ ಮಾಡಿಲ್ಲ. ಶಾಸಕರಿಗೆ ಊಟ ಮಾಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.
ಅವರು ಜಿಲ್ಲಾ ಉಸ್ತುವಾರಿ ಸಚಿವರಾದ ಬಳಿಕ ಬೆಳಗಾವಿಗೆ ಭೇಟಿ ನೀಡಿದ ಸಮಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಲಾಕ್ಡೌನ್ ನಿಂದ ಹೋಟೆಲ್ ಬಂದ್ ಇದ್ದಾವೆ, ಹೀಗಾಗಿ ಶಾಸಕ ಉಮೇಶ ಕತ್ತಿ ನಿವಾಸದಲ್ಲಿ ಊಟಕ್ಕೆ ಶಾಸಕರು ಸೇರಿದ್ದಾರೆ. ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದರು.
ಈ ಮೊದಲು ಜಗದೀಶ ಶೆಟ್ಟರ್ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು. ಆಗಲೂ ನಾನೇ ಜಿಲ್ಲಾ ಉಸ್ತುವಾರಿ ಸಚಿವನಂತೆಯೇ ಇದ್ದೆ ಈಗ ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೂ ಯಾವುದೇ ರೀತಿಯ ಸಮಸ್ಯೆವಿಲ್ಲ. ಮೂರನೇ ಬಾರಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೇನೆ. ಒಳ್ಳೆಯ ಸಲಹೆ ಸೂಚನೆ ಯಾರೇ ನೀಡಿದರೂ ಸ್ವೀಕಾರ ಮಾಡ್ತೇನೆ, ಪಕ್ಷಾತೀತವಾಗಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ ಎಂದು ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದರು.
ಕಳೆದ ಬಾರಿ ಪ್ರವಾಹ ವೇಳೆ ಸರ್ಕಾರ, ಜಿಲ್ಲಾಡಳಿತ ಏನೇನು ತಪ್ಪು ಮಾಡಿತ್ತು ಅದನ್ನು ಸರಿಪಡಿಸುವೆ. ನೇಕಾರರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸುತ್ತೇನೆ ಎಂದರು.
ಬಿಜೆಪಿ ಅತೃಪ್ತ ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ರಮೇಶ ಜಾರಕಿಹೊಳಿ, ಸಿದ್ದರಾಮಯ್ಯ ಮಹಾನ್ ನಾಯಕರು ಅವರ ಬಗ್ಗೆ ಗೌರವವಿದೆ ಅವರ ಬಗ್ಗೆ ಮಾತನಾಡಲ್ಲ, ಸಿದ್ದರಾಮಯ್ಯ ಕಣ್ಣು ಹಳದಿ ಇದೆ ಅವರು ಹಾಗೇ ನೋಡಲಿ ಬಿಡಿ ಎಂದರು.
ರಾಜ್ಯಸಭಾ ಟಿಕೆಟ್ಗಾಗಿ ಡಾ. ಪ್ರಭಾಕರ ಕೋರೆ – ರಮೇಶ ಕತ್ತಿ ಪೈಪೋಟಿ ವಿಚಾರವಾಗಿ ಮಾಧ್ಯಮ ಮಿತ್ರರು ಪ್ರಶ್ನಿಸಿದಾಗ ಈ ಕುರಿತು, ನಮ್ಮ ಅನಿಸಿಕೆ ಹೈಕಮಾಂಡ್ಗೆ ತಿಳಿಸಿದ್ದೇವೆ ಅದನ್ನು ಬಹಿರಂಗವಾಗಿ ಹೇಳಕ್ಕಾಗಲ್ಲ , ಅದನ್ನು ಪಕ್ಷ ನಿರ್ಧರಿಸುತ್ತೆ, ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತೆ ಅದಕ್ಕೆ ನಾವು ಬದ್ಧರಾಗಿದ್ದೇವೆ. ನಮ್ಮ ಮುಖ್ಯಮಂತ್ರಿ ಚಿಕ್ಕವರಿದ್ದಾಗಿಂದ ಹೋರಾಟ ಮಾಡುತ್ತಾ ಬಂದಿದ್ದಾರೆ, ಇಂತಹದ್ದನ್ನು ಬಹಳ ಫೇಸ್ ಮಾಡಿದಾರೆ, ಸಮಸ್ಯೆ ಬಗೆಹರಿಸುತ್ತಾರೆ ಎಂದು ರಮೇಶ ಜಾರಕಿಹೊಳಿ ಹೇಳಿದರು.
ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಜೆ ಭೂಮಿ ಎಲ್ಲಿ ನೀಡತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮೇಶ ಜಾರಕಿಹೊಳಿ, ಈ ಹಿಂದೆ ಗಡಿಬಿಡಿಯಲ್ಲಿ ಈ ಕುರಿತು ಆರ್ಡರ್ ಪಾಸ್ ಆಗಿತ್ತು. ಈಗ ಈ ಆರ್ಡರ್ ಹಿಂದಕ್ಕೆ ಪಡೆದಿದ್ದೇವೆ. ಹೈವೇ ಪಕ್ಕದಲ್ಲಿ ಹೊಸ ಜಾಗ ನೀಡುವ ಕುರಿತು ಹೊಸ ಆರ್ಡರ್ ಪಾಸ್ ಮಾಡತ್ತೇವಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಭರವಸೆ ನೀಡಿದರು.