ಕಾಸರಗೋಡು: ದೇಶಾದ್ಯಂತ ಕೊರೋನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚಳವಾಗುತ್ತಿದ್ದು , ಕೇರಳಕ್ಕೂ ಆತಂಕ ತಟ್ಟಿದೆ. ಈ ಹಿನ್ನೆಲೆಯಲ್ಲಿ ಜೂನ್ ಅಂತ್ಯದವರೆಗೂ ದೇವಸ್ಥಾನಗಳಿಗೆ ಭಕ್ತರಿಗೆ ಪ್ರವೇಶ ನಿರ್ಬಂಧಕ್ಕೆ ರಾಜ್ಯ ಸರಕಾರವು ಮುಂದಾಗಿದೆ.
ಈ ಕುರಿತು ಕೇರಳ ದೇವಸ್ವಂ ಮಂಡಳಿ ನಿರ್ಧಾರ ಕೈಗೊಂಡಿದ್ದು , ಅದರಂತೆ ಜೂನ್ 18 ರಿಂದ 30ರ ವರೆಗೆ ಭಕ್ತರಿಗೆ ದೇವಸ್ಥಾನ ಪ್ರವೇಶ ರದ್ದು ಮಾಡಿದೆ.
ದೇವಾಲಯಗಳಲ್ಲಿ ಪ್ರತಿನಿತ್ಯದ ಪೂಜೆ ನಡೆಯಲಿದೆ. ಆದರೆ ಭಕ್ತರಿಗೆ ಪ್ರವೇಶ ಸಂಪೂರ್ಣ ನಿರಾಕರಿಸಲಾಗಿದೆ.
ಕೇರಳ ದೇವಸ್ವಂ ಮಂಡಳಿಯ ಅಧೀನದಲ್ಲಿ ಕಾರ್ಯನಿರ್ವಹಿಸಲಿರುವ ಎಲ್ಲ ದೇವಸ್ಥಾನಗಳು ಈ ಆದೇಶ ಪಾಲಿಸಬೇಕಾಗಿವೆ.
ಇದು ಕೇವಲ ದೇವಾಲಯಕ್ಕೆ ಮಾತ್ರ ಸೀಮಿತವಾಗಿದ್ದು , ಚರ್ಚ್, ಮಸೀದಿ ಅಥವಾ ಇನ್ನಿತರ ಧಾರ್ಮಿಕ ಕೇಂದ್ರಗಳಿಗೆ ಇದು ಅನ್ವಯ ಇಲ್ಲ ಎಂಬುದು ಅಚ್ಚರಿಗೆ ಕಾರಣವಾಗಿದೆ.
ಜೂನ್ 8 ರಿಂದ ಕೇಂದ್ರ ಸರಕಾರವು ದೇವಸ್ಥಾನಗಳನ್ನು ತೆರೆಯಲು ಅನುಮತಿ ನೀಡಿತ್ತು. ಸಾಮಾಜಿಕ ಅಂತರ ಕಾಪಾಡಿಕೊಂಡು ಭಕ್ತರಿಗೂ ಅವಕಾಶ ಮಾಡಿಕೊಂಡುವಂತೆ ಸೂಚಿಸಿತ್ತು. ಆದರೆ ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮದ ಅಂಗವಾಗಿ ಕೇರಳ ದೇವಸ್ವಂ ಮಂಡಳಿಯು ಮತ್ತೆ ಭಕ್ತರಿಗೆ ಪ್ರವೇಶ ನೀಡದಿರಲು ತೀರ್ಮಾನಿಸಿದೆ.
ಪ್ರಸ್ತುತ ಕೇರಳದಲ್ಲಿ ಒಟ್ಟು 2698 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದರಲ್ಲಿ 1324 ಜನರು ಗುಣಮುಖರಾಗಿದ್ದಾರೆ. ಇನ್ನೂ 1352 ಮಂದಿ ಆಸ್ಪತ್ರೆ ಹಾಗೂ ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.