ಕಾಸರಗೋಡು: ಕೇರಳದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಂದಿದೆ ಎನ್ನುವಾಗಲೇ ವಯನಾಡು ಮತ್ತು ಕಾಸರಗೋಡಿನಲ್ಲಿ ಮತ್ತೆ ಕೊವಿಡ್ – 19 ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಚೆನ್ನೈನ ಕೊರೋನಾ ಹಾಟ್ ಸ್ಪಾಟ್ ಪ್ರದೇಶವಾದ ಕೊಯಂಬೆಡು ಮಾರುಕಟ್ಟೆಯಿಂದ ಬಂದ ಲಾರಿ ಚಾಲಕನಿಗೆ ಕೊವಿಡ್ – 19 ಪಾಸಿಟಿವ್ ದೃಢಪಟ್ಟಿದ್ದು , ಅಧಿಕಾರಿಗಳಿಗೆ ಈ ಚಾಲಕನ ಸಂಪರ್ಕಿತರನ್ನು ಪತ್ತೆ ಹಚ್ಚುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ 52 ವರ್ಷದ ಲಾರಿ ಚಾಲಕನ ಸಂಬಂಧಿಗಳು ಸೇರಿದಂತೆ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಮಂದಿಗೆ ಈಗಾಗಲೇ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಶುಕ್ರವಾರ ವಯನಾಡಿನಲ್ಲಿ ಮತ್ತೆ ಐದು ಹೊಸ ಪ್ರಕರಣಗಳು ವರದಿಯಾಗಿದ್ದು, ಈ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.
ಕೇರಳದ ಮತ್ತೊಂದು ಜಿಲ್ಲೆ ಕಾಸರಗೋಡಿನಲ್ಲಿ ಹಲವು ದಿನಗಳ ನಂತರ ಮತ್ತೆ 14 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇದರ ಹಿಂದೆ ಮಹಾರಾಷ್ಟ್ರದ ಸಂಪರ್ಕ ವ್ಯಕ್ತಿಗಳೂ ಒಳಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿರುವ ಜಿಲ್ಲೆಯ ಮೂಲ ನಿವಾಸಿಗಳು ಇದೀಗ ತಲಪ್ಪಾಡಿ ಗಡಿ ಮೂಲಕ ಆಗಮಿಸುತ್ತಿದ್ದು , ಅವರಲ್ಲಿ ಹೆಚ್ಚಿನವರಿಗೂ ಕೊರೋನಾ ಖಚಿತಗೊಂಡಿದೆ. ಈ ವ್ಯಕ್ತಿಗಳಿಂದ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಹೆಚ್ಚಳಗೊಳ್ಳುವ ಭೀತಿಯಿದ್ದು , ಜನರು ಆತಂಕಕ್ಕೊಳಗಾಗಿದ್ದಾರೆ. ಈ ಮಧ್ಯೆ ಮಹಾರಾಷ್ಟ್ರದಿಂದ ಬಂದ ವ್ಯಕ್ತಿಯ ಮೂಲಕ ಪೈವಳಿಕೆ ಚಿಪ್ಪಾರು ಪ್ರದೇಶದ ಒಂದು ಕುಟುಂಬದ 4 ಮಂದಿಗೆ ಕೊರೋನಾ ಬಾಧಿಸಿದ್ದು , ಸಿಪಿಎಂ ಮುಖಂಡನಾದ ಈತ, ಅನೇಕ ಮಂದಿಯನ್ನು ಭೇಟಿಯಾಗಿರುವುದು ಜಿಲ್ಲೆಯ ಜನರ ನಿದ್ದೆಗೆಡಿಸಿದೆ.