ಹೊಸದಿಗಂತ ವರದಿ, ಕಲಬುರಗಿ:
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹ ಹಾನಿಗೆ ನೀಡಲಾಗುವ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಹೆಚ್ಚಿಸಿರುವ ಆದೇಶ ಜನಪರ ಆಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರರು ಆಗಿರುವ ಸೇಡಂ ಕ್ಷೇತ್ರದ ಶಾಸಕ ರಾಜಕುಮಾರ ಪಾಟೀಲ್ ತಿಳಿಸಿದ್ದಾರೆ.
ರಾಷ್ಟ್ರೀಯ ವಿಕೋಪ ಪರಿಹಾರ ನಿಧಿ ಹಾಗೂ ರಾಜ್ಯ ವಿಕೋಪ ಪರಿಹಾರ ನಿಧಿ ನಿಗದಿಪಡಿಸಿದ ಮಾರ್ಗಸೂಚಿ ಪರಿಹಾರ ಮೊತ್ತವನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಹೆಚ್ಚಿಸಿ ನಿನ್ನೆ ಯಷ್ಟೇ ಆದೇಶ ಹೊರಡಿಸಿದೆ. ಇದು ಸಂಕಷ್ಟಕ್ಕೆ ಒಳಗಾಗುವ ಸಂತ್ರಸ್ತರಿಗೆ ಸ್ಪಂದಿಸುವಂತಾಗಿದೆ ಎಂದಿದ್ದಾರೆ.
ಜೀವ ಹಾನಿಗೆ ನೀಡಲಾಗುವ ಪರಿಹಾರ 4 ಲಕ್ಷ ರೂ.ದಿಂದ 5 ಲಕ್ಷ ರೂ.ಹೆಚ್ಚಿಸಿರುವುದು, ಶೇ. 75ರಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ ಹಾಗೂ ಶೇ. 25ರಿಂದ ಶೇ. 75 ರಷ್ಟು ಮನೆ ಹಾನಿಯಾಗಿ ಹೊಸ ಮನೆ ನಿರ್ಮಿಸಲಿರುವ ಮನೆಗಳಿಗೆ 95100 ರೂ ಇದ್ದ ಪರಿಹಾರವನ್ನು ಒಮ್ಮೇಲೆ 5 ಲಕ್ಷ ರೂ.ಗೆ ಹೆಚ್ಚಿಸಿರುವುದು ಹಾಗೂ ಮನೆಗಳ ದುರಸ್ತಿ ಪರಿಹಾರ ಸಹ 3 ಲಕ್ಷ ರೂ.ಗೆ ಹೆಚ್ಚಿಸಿರುವುದು. ಕೇಂದ್ರ ಪ್ರಕೃತಿ ವಿಕೋಪ ಪರಿಹಾರಕ್ಕೆ ರಾಜ್ಯ ಸರ್ಕಾರ 4 ಲಕ್ಷ ರು ಹೆಚ್ಚಿಸಿರುವುದು ಐತಿಹಾಸಿಕ ನಿರ್ಧಾರ ವಾಗಿದೆ. ಎಂದು ತೇಲ್ಕೂರ ಪತ್ರಿಕಾ ಹೇಳಿಕೆಯಲ್ಲಿ ವಿವರಣೆ ನೀಡಿದ್ದಾರೆ.
ಒಮ್ಮೇಲೆ ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿ ಇಷ್ಟೊಂದು ಪ್ರಮಾಣದಲ್ಲಿ ಪರಿಹಾರ ಮೊತ್ತ ಹೆಚ್ಚಳ ಮಾಡಿರುವುದು ದಾಖಲೆಯಾಗಿದೆ. ಬಡವರಿಗೆ ಸಹಾಯಕ್ಕೆ ಧಾವಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾದರಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅತಿವೃಷ್ಟಿ ಹಾನಿಗೆ ತುತ್ತಾಗುವ ಜನರಿಗೆ ಕಣ್ಣೀರು ಒರೆಸುವ ಕಾರ್ಯ ಮಾಡಿದ್ದಾರೆ.
ಒಟ್ಟಾರೆ ಅತಿವೃಷ್ಟಿ ಹಾನಿ ಎದುರಿಸಲು ಸರ್ಕಾರ ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಹಾನಿಗೆ ತಕ್ಕ ಪರಿಹಾರ ನೀಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಗಳು ಕಂದಾಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ತೇಲ್ಕೂರ ಹೇಳಿಕೆಯಲ್ಲಿ ವಿವರಣೆ ನೀಡಿದ್ದಾರೆ.