ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆ ಹಾಗೂ ನೀರಿನ ಮಟ್ಟ ಹೆಚ್ಚಳವಾದ ಹಿನ್ನಲೆಯಲ್ಲಿ ಕೇರಳದ ಇಡುಕ್ಕಿ ಅಣೆಕಟ್ಟು ತೆರೆಯಲಾಗಿದ್ದು, ಪೆರಿಯಾರ್ ಕರಾವಳಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಇದಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮವಾಗಿ ಪೆರಿಯಾರ್ ಕರಾವಳಿಯ 79 ಕುಟುಂಬಗಳಿಗೆ ನೋಟಿಸ್ ನೀಡಲಾಗಿತ್ತು. ಸಂಭಾವ್ಯ ನೆರೆ ಅನಾಹುತ ತಪ್ಪಿಸಲು ಒಟ್ಟು 23 ಸ್ಥಳಗಳಲ್ಲಿ ಶಿಬಿರ ಆರಂಭಿಸಲಾಗಿದೆ. ಜೊತೆಗೆ ಇಡುಕ್ಕಿ, ಕಂಜಿಕುಝಿ, ತಂಗಮಣಿ, ವತ್ತಿಕುಡಿ ಮತ್ತು ಉಪ್ಪುತೋಡ್ ಗ್ರಾಮಗಳಲ್ಲಿಯೂ ಅಧಿಸೂಚನೆ ಹೊರಡಿಸಲಾಗಿದೆ.
ಮಾಹಿತಿಗಳ ಪ್ರಕಾರ ಅಣೆಕಟ್ಟಿನ ಒಂದು ಶಟರ್ 70 ಸೆಂ.ಮೀ ಎತ್ತರಿಸಿ ೫೦ ಕ್ಯುಸೆಕ್ ನೀರು ಬಿಡಲಾಗಿದೆ. ಅಣೆಕಟ್ಟೆಯಿಂದ ಬಿಡುವ ನೀರು ಮೊದಲು ಚೆರುತೋಣಿ ಪಟ್ಟಣಕ್ಕೆ ಬರಲಿದೆ. ಅಲ್ಲಿಂದ ತಡಿಯಂಬಾಡ್ ಮತ್ತು ಕರಿಂಬನ್ ಪ್ರದೇಶಗಳಿಗೆ ತಲುಪಲಿದೆ. ಪೆರಿಯಾರ್ ಕಣಿವೆ ಮತ್ತು ಕೀರಿತೋಡ್ ಮೂಲಕ ಪನಮಕುಟ್ಟಿಗೆ ತಲುಪುವ ನೀರು ಪನ್ನಿಯರ್ಕುಟ್ಟಿ ನದಿಯನ್ನು ಮತ್ತು ನಂತರ ಪೆರಿಯಾರ್ ಅನ್ನು ಸೇರುತ್ತದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ