ಹೊಸದಿಗಂತ ಡಿಜಿಟಲ್ ಡೆಸ್ಕ್
ಕಳೆದವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಚೆನ್ನೈ-ಮೈಸೂರು-ಬೆಂಗಳೂರು ಮಾರ್ಗದ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ತಮಿಳುನಾಡಿನ ಅರಕ್ಕೋಣಂನಲ್ಲಿ ಸಂಚರಿಸುತ್ತಿದ್ದ ವೇಳೆ ಜಾನುವಾರು ಡಿಕ್ಕಿಯಾಗಿದ್ದರಿಂದ ಹಾನಿಗೊಳಗಾಗಿದೆ.
ಸೆಮಿ-ಹೈ-ಸ್ಪೀಡ್ ರೈಲು ಚಲಿಸುತ್ತಿದ್ದಾಗ ಕರುವೊಂದು ಅಡ್ಡಸಿಕ್ಕಿ ಡಿಕ್ಕಿಯಾಗಿದೆ. ಇದರಿಂದಾಗಿ ರೈಲಿನ ಮುಂಭಾಗದಲ್ಲಿ ಸನ್ಣ ಪ್ರಮಾಣದ ಹಾನಿಯಾಗಿದೆ. ಆದರೆ ಕರು ಸಾವನ್ನಪ್ಪಿದೆ. ಅಪಘಾತ ಸಂಭವಿಸಿದಾಗ ರೈಲು ಗಂಟೆಗೆ 90 ಕಿ.ಮೀ ವೇಗದಲ್ಲಿ ಹೋಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಇದು ಪ್ರಯಾಣಿಸಬೇಕಾದ ಘಾಟ್ ವಿಭಾಗದಲ್ಲಿನ ತಿರುವುಗಳನ್ನು ಪರಿಗಣಿಸಿ, ಅಧಿಕಾರಿಗಳು ಅದರ ಸರಾಸರಿ ವೇಗವನ್ನು ಗಂಟೆಗೆ 75 ರಿಂದ 77 ಕಿಮೀ ಗೆ ನಿಗದಿಪಡಿಸಿದ್ದಾರೆ. ಇದು ದೇಶದಲ್ಲಿ ಇದುವರೆಗೆ ಪ್ರಾರಂಭಿಸಲಾದ ಐದು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಲ್ಲಿ ನಿಧಾನಗತಿಯದ್ದಾಗಿದೆ.
ಅಪಘಾತದ ನಂತರ ಹಾನಿಯನ್ನು ಪರಿಶೀಲಿಸಲು ರೈಲನ್ನು ಕೆಲವು ನಿಮಿಷಗಳ ಕಾಲ ನಿಲ್ಲಿಸಲಾಗಿತ್ತು. ನಂತರ ತನ್ನ ಗಮ್ಯಸ್ಥಾನವಾದ ಚೆನ್ನೈಗೆ ತನ್ನ ಪ್ರಯಾಣವನ್ನು ನಡೆಸಿತು. ಅಕ್ಟೋಬರ್ನಿಂದ ವಂದೇ ಭಾರತ್ ರೈಲಿಗೆ ಇದು ಐದನೇ ಅಪಘಾತವಾಗಿದೆ.
ಭವಿಷ್ಯದಲ್ಲಿ ಇಂತಹ ಅಹಿತಕರ ಘಟನೆಗಳನ್ನು ತಪ್ಪಿಸಲು ಇಲಾಖೆಯು ಕರುವನ್ನು ಹಳಿಯ ಸಮೀಪ ಬಿಟ್ಟ ಮಾಲೀಕರನ್ನು ಪತ್ತೆಹಚ್ಚಿ, ಪ್ರಕರಣವನ್ನು ದಾಖಲಿಸಿ ಭಾರಿ ದಂಡವನ್ನು ವಿಧಿಸುತ್ತದೆ ಎಂದು ದಕ್ಷಿಣ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಪ್ರಕಟಣೆ ತಿಳಿಸಿದೆ.
ಜಾನುವಾರುಗಳು ಹಳಿಗಳ ಮೇಲೆ ಬೀಳದಂತೆ ತಡೆಯಲು ಮುಂದಿನ ಆರು ತಿಂಗಳಲ್ಲಿ ಸರ್ಕಾರವು 1,000 ಕಿಲೋಮೀಟರ್ ವ್ಯಾಪ್ತಿಯಲ್ಲಿ ಗಡಿ ಗೋಡೆಯನ್ನು ನಿರ್ಮಿಸಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ