ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುಡುಕ ಪ್ರಯಾಣಿಕನ ಅವಾಂತರಕ್ಕೆ ಹೈರಾಣಾಗಿ ಕತಾರ್ಗೆ ತೆರಳುತ್ತಿದ್ದ ವಿಮಾನ ಮುಂಬೈಗೆ ತೆರಳಿದ ವಿದ್ಯಮಾನ ನಡೆದಿದೆ.
ಈ ಅವಾಂತರಕ್ಕೆ ಕಾರಣವಾದ ಪ್ರಯಾಣಿಕನನ್ನು ಮುಂಬೈನಲ್ಲಿ ವಿಮಾನದಿಂದಿಳಿಸಿ ‘ಪೊಲೀಸ್ ಆತಿಥ್ಯ’ ನೀಡಲಾಗಿದೆ.
ಇಷ್ಟಕ್ಕೂ ನಡೆದದ್ದೇನು?
ಕತಾರ್ನ ದೋಹಾಗೆ ತೆರಳಲು ವಿಮಾನ ಬೆಂಗಳೂರು ನಿಲ್ದಾಣದಿಂದ ಟೇಕ್ಆಫ್ ಆದ ಕೆಲವು ಸಮಯಗಳ ಬಳಿಕ ಅದರಲ್ಲಿದ್ದ ಪ್ರಯಾಣಿಕ ಅತಿಯಾಗಿ ಮದ್ಯ ಸೇವಿಸಿದ್ದಲ್ಲದೆ, ಗಗನಸಖಿಯ ಜೊತೆ ಅಸಭ್ತವಾಗಿ ವರ್ತಿಸಲಾರಂಭಿಸಿದ್ದ. ಇದಲ್ಲದೆ ಇನ್ನಷ್ಟು ಮದ್ಯ ಪೂರೈಸುವಂತೆ ಕೂಡಾ ಆತ ಗಗನಸಖಿಗೆ ಒತ್ತಾಯಿಸಿದ್ದ. ಈತನನ್ನು ‘ನಿಯಂತ್ರಿಸಲು’ ಸಹ ಪ್ರಯಾಣಿಕರು ಪ್ರಯತ್ನಿಸಿದರಾದರೂ ಅದ್ಯಾವುದೂ ಫಲನೀಡಿಲ್ಲ. ಪರಿಸ್ಥಿತಿ ಅತಿರೇಕಕ್ಕೆ ತಲುಪುತ್ತಿರುವುದನ್ನು ಗಮನಿಸಿದ ವಿಮಾನದ ಪೈಲಟ್ ದೋಹಾದ ಬದಲಾಗಿ ನೇರ ಮುಂಬೈಗೆ ತೆರಳಿ ತುರ್ತು ಲ್ಯಾಂಡಿಂಗ್ ನಡೆಸಿದ್ದಾರೆ. ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.