ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಪ್ರಥಮ ಆಕ್ಸಿಜನ್ ಪ್ಲಾಂಟ್ ಚಟ್ಟಂಚಾಲ್ನಲ್ಲಿ ಶನಿವಾರ ಲೋಕಾರ್ಪಣೆಗೊಂಡಿದೆ.
ಈ ಮೂಲಕ ಜನತೆಯ ಇನ್ನೊಂದು ಬಹುಕಾಲದ ಕನಸು ನನಸಾಗಿದೆ.
ಜಿಲ್ಲಾ ಪಂಚಾಯತ್ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಸಹಯೋಗದೊಂದಿಗೆ ನಿರ್ಮಾಣಗೊಂಡ ಈ ಆಕ್ಸಿಜನ್ ಪ್ಲಾಂಟ್ ಉದ್ಘಾಟಿಸಿ ಮಾತನಾಡಿದ ಕೈಗಾರಿಕೆ, ಕಾನೂನು ಸಚಿವ ಪಿ.ರಾಜೀವ್, ಖಾಸಗಿ ವಲಯದಲ್ಲಿ ಉದ್ಯಮ ಆರಂಭಿಸಲು ಕೈಗಾರಿಕೋದ್ಯಮಿಗಳು 10 ಎಕರೆ ಭೂಮಿ ಕಂಡುಕೊಂಡರೆ ಮೂಲಸೌಕರ್ಯವನ್ನು ಸರ್ಕಾರ ವತಿಯಿಂದ ನೀಡಲಾಗುವುದು ಎಂದರು.
ಶಾಸಕ ಸಿ . ಎಚ್ ಕುಞಂಬು ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಆಮ್ಲಜನಕದ ಮೊದಲ ಆದೇಶವನ್ನು ಸಂಸದ ರಾಜಮೋಹನ್ ಉಣ್ಣಿತ್ತಾನ್ ಸ್ವೀಕರಿಸಿದರು. ಇಂಡಸ್ಟ್ರಿಯಲ್ ಆಕ್ಸಿಜನ್ ಮೊದಲ ಆದೇಶವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಸ್ವೀಕರಿಸಿದರು.
ಇದೇ ಸಂದರ್ಭ ಆಕ್ಸಿಜನ್ ಸಿಲಿಂಡರ್ ಚಾಲೆಂಜ್ ಸ್ವೀಕರಿಸಿ ಕೋವಿಡ್ ಸಂತ್ರಸ್ತರಿಗೆ ಸಹಾಯ ಮಾಡಿದಕ್ಕಾಗಿ ಕೇರಳ ಆಟೋಮೊಬೈಲ್ ವರ್ಕ್ಶಾಪ್ ಮಾಲೀಕರ ಸಂಘ, ಕ್ವಾಲಿಟಿ ಟ್ರೇಡರ್ಸ್ ಕಾಸರಗೋಡು, ಕೆಇಎ ಕುವೈತ್, ಬಿಜು ಟ್ರೇಡರ್ಸ್ ಕಾಸರಗೋಡು, ಕೇರ್ ಸಿಸ್ಟಮ್ ಕೊಚ್ಚಿ ಮತ್ತು ನಿರ್ಮಿತಿ ಕೇಂದ್ರವನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಗಣ್ಯರು ಉಪಸ್ಥಿತರಿದ್ದರು.