ಹೊಸದಿಗಂತ ವರದಿ, ಮಡಿಕೇರಿ:
ಬೇಟೆಗೆಂದು ತೆರಳಿದ್ದ ನಾಲ್ವರ ಪೈಕಿ ಓರ್ವ ನಾಪತ್ತೆಯಾಗಿರುವ ಘಟನೆ ನಡೆದಿದ್ದು, ಈ ಸಂಬಂಧ ಓರ್ವನನ್ನು ಕುಶಾಲನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ..
ನಂಜರಾಯಪಟ್ಟಣ ಗ್ರಾ.ಪಂ. ವ್ಯಾಪ್ತಿಯ ವಿರೂಪಾಕ್ಷಪುರದ ನಾಲ್ವರು ಸ್ನೇಹಿತರು ಭಾನುವಾರ ಬೇಟೆಗೆಂದು ಕಾವೇರಿ ನದಿ ದಾಟಿ ಮೈಸೂರು ಜಿಲ್ಲಾ ವ್ಯಾಪ್ತಿಯ ಕಾಡಿಗೆ ತೆರಳಿದ್ದರೆನ್ನಲಾಗಿದ್ದು, ಎರಡು ದಿನದ ಬಳಿಕ ಮೂವರು ಮಾತ್ರ ಗ್ರಾಮಕ್ಕೆ ಮರಳಿದ್ದಾರೆ. ಬೇಟೆಗೆಂದು ತೆರಳಿದ್ದವರ ಈ ಪೈಕಿ ಆಟೋ ಚಾಲಕ ವಿನೋದ್ ಎಂಬಾತ ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ.
ನಾಪತ್ತೆಯಾಗಿರುವ ವಿನೋದ್ ಅವರ ಪತ್ನಿಯ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಧರ್ಮ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದು, ಮತ್ತಿಬ್ಬರು ತಲೆಮರೆಸಿಕೊಂಡಿರುವರೆನ್ನಲಾಗಿದೆ.
ಕೆಲವರ ಪ್ರಕಾರ ಮೀನು ಹಿಡಿಯಲು ನದಿಗೆ ತೆರಳಿದ ಸಂದರ್ಭ ವಿನೋದ್ ಮುಳುಗಿರುವ ಸಾಧ್ಯತೆ ಇರುವುದಾಗಿ ಹೇಳಲಾಗಿದ್ದು, ನಾಪತ್ತೆಯಾದವನಿಗಾಗಿ ಗ್ರಾಮಸ್ಥರು ಗ್ರಾಮದ ನದಿ ಬಳಿ ಹುಡುಕಾಟ ನಡೆಸುತ್ತಿದ್ದಾರೆ.
ಆದರೆ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬೀಳಬೇಕಿದೆ.