ಹೊಸದಿಗಂತ ವರದಿ ಬೀದರ್:
ಜಿಲ್ಲೆಯಾದ್ಯಂತ ಕಳೆದ 20 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದೆ. ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿದ್ದು ಜನರ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿ ಬೀದರ್ ತಾಲೂಕಿನ ಮರಖಲ್ ಗ್ರಾಮದ ವಾರ್ಡ್ ಸಂಖ್ಯೆ 3ರ ರಸ್ತೆಯಲ್ಲಿ ನೀರು ತುಂಬಿದ್ದು, ಇದರಿಂದಾಗಿ ಜನರಿಗೆ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಡೇಂಗೂ, ಮಲೇರಿಯಗಳಂತಹ ಮಾರಕ ರೋಗಗಳ ಭೀತಿಯಲ್ಲಿ ಜನರು ಬದುಕುವಂತಾಗಿದೆ.
ಕೇಂದ್ರದ ಗ್ರಾಮೀಣ ಸ್ವಚ್ಛತಾ ಹಾಗೂ ನೈರ್ಮಲ್ಯ ಯೋಜನೆಯಡಿ ಒಳಚರಂಡಿ ಹಾಗೂ ರಸ್ತೆ ನಿರ್ಮಿಸಲು ಕೋಟ್ಯಂತರ ರೂಪಾಯಿ ಅನುದಾನ ಬರುತ್ತಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸ್ಥಳೀಯ ಶಾಸಕರು ಹಾಗೂ ಸಂಸತ್ ಸದಸ್ಯರಿಗೆ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ. ಕೂಡಲೇ ಗ್ರಾಮದಲ್ಲಿನ ಹದಗೆಟ್ಟ ರಸ್ತೆಗಳನ್ನು ಸುಧಾರಿಸಿ ಒಳಚರಂಡಿಗಳನ್ನು ನಿರ್ಮಿಸಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.