ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಲಂಬೋದಲ್ಲಿ ಸರ್ಕಾರ ವಿರೋಧಿ ಪ್ರತಿಭಟನಾಕಾರರ ಮೇಲೆ ಮಾರಣಾಂತಿಕ ದಾಳಿಗೆ ಸಂಬಂಧಿಸಿದಂತೆ ಶ್ರೀಲಂಕಾದ ನ್ಯಾಯಾಲಯವು ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ, ಅವರ ಪುತ್ರ ನಮಲ್ ರಾಜಪಕ್ಸೆ ಮತ್ತು ಇತರ 15 ಮಂದಿಗೆ ಅಂತರಾಷ್ಟ್ರೀಯ ಪ್ರಯಾಣ ನಿಷೇಧವನ್ನು ವಿಧಿಸಿದೆ.
ಗೊಟಗೋಗಾಮ ಮತ್ತು ಮೈನಾಗೋಗಾಮಾ ಪ್ರದೇಶದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆಗಳ ಮೇಲೆ ಮಹಿಂದಾ ರಾಜಪಕ್ಸೆ ಅವರ ಬೆಂಬಲಿಗರು ದಾಳಿ ನಡೆಸಿದ್ದರು. ಆ ನಂತರ ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿನ್ನೆಲೆಯಲ್ಲಿ ಶ್ರಿಲಂಕಾದ ಅಟಾರ್ನಿ ಜನರಲ್ ಮಂಹಿದಾ ರಾಜಪಕ್ಸೆ ಸೇರಿದಂತೆ ಇತರ 16 ಮಂದಿಯ ಮೇಲೆ ಪ್ರಯಾಣ ನಿರ್ಬಂಧ ವಿಧಿಸುವಂತೆ ಕೋರಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ, ಅವರ ಪುತ್ರ ನಮಲ್ ರಾಜಪಕ್ಸೆ, ಸಂಸದರಾದ ಜಾನ್ಸ್ಟನ್ ಫೆರ್ನಾಂಡೋ, ಪವಿತ್ರಾ ವನ್ನಿಯಾರಚಿ, ಸಂಜೀವ ಎದಿರಿಮನ್ನೆ, ಕಾಂಚನಾ ಜಯರತ್ನ, ರೋಹಿತ ಅಬೇಗುಣವರ್ಧನ, ಸಿ.ಬಿ.ರತ್ನಾಯಕೆ, ಸಂಪತ್ ಆತುಕೋರಲ, ರೇಣುಕಾ ಪೆರೇರಾ, ಸನತ್ ನಿಶಾಂತ, ಹಿರಿಯ ಡಿಐಜಿ ದೇಶಬಂದು ತೆನ್ನಕೋನ್ ಮುಂತಾದವರ ಮೇಲೆ ಅಂತರಾಷ್ಟ್ರೀಯ ಪ್ರಯಾಣ ನಿರ್ಬಂಧ ಹೇರಿದೆ ಮತ್ತು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.