ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡಿಯಾ ಫೌಂಡೇಶನ್ ವತಿಯಿಂದ ಬೆಂಗಳೂರಿನಲ್ಲಿ ʼ7 ನೇ ಇಂಡಿಯಾ ಐಡಿಯಾ ಕಾನ್ಕ್ಲೇವ್ʼ ಹೆಸರಿನ ಚಿಂತನಾ ಸಮಾವೇಶ ನಡೆಯಲಿದೆ.
ಇಂಡಿಯಾ ಫೌಂಡೇಷನ್ ವತಿಯಿಂದ ಪ್ರತೀವರ್ಷವೂ ಸಮಾಜದ ವಿವಿಧ ಗಣ್ಯರನ್ನು ಆಹ್ವಾನಿಸಿ ಚಿಂತನ ಮಂಥನ ಸಮಾವೇಶಗಳನ್ನು ನಡೆಸಲಾಗುತ್ತದೆ. ವಿವಿಧ ಕಾರ್ಪೋರೇಟ್ ಸಂಸ್ಥೆಗಳ ಸಂಸ್ಥಾಪಕರು, ಕಾರ್ಯನಿರ್ವಹಣಾಧಿಕಾರಿಗಳು, ಯುವ ಉದ್ಯಮಿಗಳು, ಬರಹಗಾರರು-ಚಿಂತಕರು ಸಮಾಜ ಸೇವಕರು, ಸಂಸದರು ಸೇರಿದಂತೆ ವಿವಿಧ ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳುತ್ತಾರೆ. ಪ್ರಸ್ತುತ 7 ನೇ ಚಿಂತನಾಕೂಟವನ್ನು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಹಮ್ಮಿಕೊಳ್ಳಲಾಗಿದೆ.
ಪ್ರಸ್ತುತ ಮೆಟಾ ಯುನಿವರ್ಸ್ ಎದುರಿಸುವ ಕುರಿತು ಚರ್ಚೆಗಳು, ವಿವಿಧ ಗೋಷ್ಟಿಗಳು ನಡೆಯಲಿವೆ. ಚಿಂತನಾ ಕೂಟವು ಶುಕ್ರವಾರ ಸಂಜೆ 5 ಗಂಟೆಗೆ ಉದ್ಘಾಟನೆಯಾಗಲಿದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ಧಾರೆ.
ಮುಂದಿನ ಎರಡು ಮೂರು ದಿನಗಳ ಕಾಲ ನಡೆಯುವ ಈ ಕಾನ್ಕ್ಲೇವ್ ನಲ್ಲಿ ಆರ್ಥಿಕತೆ, ರಾಜಕೀಯ, ಉದ್ಯಮ, ತಂತ್ರಜ್ಞಾನ ಹೀಗೆ ವಿವಿದ ವಿಷಯಗಳ ಕುರಿತು ಕಾರ್ಯಾಗಾರಗಳು ನಡೆಯಲಿವೆ. ಸಂಪನ್ಮೂಲ ವ್ಯಕ್ತಿಗಳಾಗಿ ಕೇಂದ್ರ ಸಚಿವರುಗಳಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಇತಿಹಾಸಕಾರ ಸಂದೀಪ್ ಬಾಲಕೃಷ್ಣ, ಓಲಾ ಸಹ-ಸಂಸ್ಥಾಪಕ ಭವೀಷ್ ಅಗರ್ವಾಲ್, ವಾಣಿಜ್ಯ ಕಾರ್ಯದರ್ಶಿ ಬಿವಿಆರ್ ಸುಬ್ರಮಣಿಯನ್, ಇಂಡಿಯನ್ ಎಕ್ಸ್ ಪ್ರೆಸ್ ನ ಅನಂತ್ ಗೋಯೆಂಕಾ, ಬಯೋಕಾನ್ ನ ಕಿರಣ್ ಮುಜುಂದಾರ್ ಷಾ ಹೀಗೆ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಹಾಗೇ ಸಮಾರೋಪದಲ್ಲಿ ರಾ.ಸ್ವ.ಸೇ.ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಮುಂತಾದವರು ಪಾಲ್ಗೊಂಡು ಚಿಂತನಾ ಕೂಟವನ್ನು ಅರ್ಥಪೂರ್ಣಗೊಳಿಸಲಿದ್ಧಾರೆ.