ಹೊಸದಿಗಂತ ವರದಿ, ವಿಜಯಪುರ:
ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಂದು ತಿಂಗಳು ಜೈಲು ಶಿಕ್ಷೆ ಮತ್ತು 23 ಸಾವಿರ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
ನಗರದ ಬಿಎಲ್’ಡಿಇ ರಸ್ತೆಯಲ್ಲಿರುವ ಬಿದರಿಯವರ ಅಶ್ವಿನಿ ಆಸ್ಪತ್ರೆಯಲ್ಲಿ ಜು.26, 2018ರಲ್ಲಿ ಆಸ್ಪತ್ರೆಯ ನರ್ಸ್ ಬಸವರಾಜ ದುಂಡಪ್ಪ ಝಳಕಿ ಎಂಬುವರ ಮೇಲೆ ರಫೀಕ್ ಅಬ್ದುಲ್ ರಜಾಕ್ ಉಮರಾಣಿ ಮತ್ತು ಸೋಹೇಬ್ ಅಕ್ತರ್ ರುಕ್ಮುದ್ದೀನ್ ಗೌರಿ ಎಂಬುವರು ಹಲ್ಲೆ ನಡೆಸಿದ್ದರು. ಈ ಸಂಬಂಧ ನಗರದ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಈ ಕುರಿತು ವಿಚಾರಣೆ ನಡೆಸಿದ ಪ್ರಧಾನ ಮತ್ತು ಸತ್ರ ಜಿಲ್ಲಾ ನ್ಯಾಯಾಧೀಶ ಶಿವಾಜಿ ಅನಂತ ನಾಲವಾಡೆ ಅವರು ಆರೋಪಿಗಳಿಗೆ ಒಂದು ತಿಂಗಳು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಎಸ್. ಎಚ್. ಹಕೀಂ ವಾದ ಮಂಡಿಸಿದ್ದಾರೆ.