ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದರೇ ಮೊದಲ ತಿಂಗಳಿನಿಂದಲೇ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ.
ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ , ಬಹಳ ಪವಿತ್ರವಾದ ದಿನ ಇವತ್ತು. ವಿಧಾನಸಭೆ ಅಧಿವೇಶನ (Vidhanasabha Session) ಕೂಡ ಮುಗಿಯುತ್ತಿದೆ. ಬಿಜೆಪಿಯ ಕೊನೆಯ ದಿನಕ್ಕೆ ಈ ದಿನ ಕೂಡ ಸಾಕ್ಷಿಯಾಗಲಿದೆ. ಈಗಾಗಲೇ ಎರಡು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆ ಯೋಜನೆ ಘೋಷಣೆ ಮಾಡಿದ್ದೇವೆ.ಇದೀಗ ಜನರ ಹಸಿವು ನೀಗಿಸಲು ಅನ್ನಭಾಗ್ಯ ಅಕ್ಕಿ (Rice) ಪ್ರತಿ ವ್ಯಕ್ತಿಗೆ 10 ಕೆ.ಜಿ ಅಕ್ಕಿ ಕೊಡಲು ಕಾಂಗ್ರೆಸ್ ಮೂರನೇ ಗ್ಯಾರಂಟಿ ನೀಡಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.
ಸಿದ್ದರಾಮಯ್ಯ (Siddaramaiah) ಮಾತನಾಡಿ, ನಾವು ಅಧಿಕಾರಕ್ಕೆ ಬಂದ ಮೊದಲ ತಿಂಗಳಿನಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೆ 10 ಕೆ.ಜಿ ಕೊಡುತ್ತೇವೆ. ನಮಗೆ ಕೇಂದ್ರದಿಂದ 3 ರೂಪಾಯಿಗೆ ಕೆ.ಜಿ ಅಕ್ಕಿ ಸಿಗುತ್ತದೆ. ಈಗ 4-5 ಸಾವಿರ ಕೋಟಿ ಅಕ್ಕಿಗೆ ಖರ್ಚಾಗುತ್ತಿದೆ. ಮುಂದೆ ನಾವು 10 ಕೆ.ಜಿ ಕೊಟ್ಟರೆ 3-4 ಸಾವಿರ ಕೋಟಿ ಹೆಚ್ಚುವರಿ ಖರ್ಚು ಮಾಡಬೇಕಾಗಬಹುದು. ಬಸವರಾಜ ಬೊಮ್ಮಾಯಿಯನ್ನ ಸುಳ್ಳು ಹೇಳೋಕೆ ಅಂತಾನೆ ಆರ್ ಎಸ್ ಎಸ್ (RSS) ನವರು ಆಯ್ಕೆ ಮಾಡಿದ್ದಾರೆ ಎಂದರು.
ತಲಾ 10 ಕೆ.ಜಿ ಕೊಡಲು ಪಕ್ಷದಿಂದ ತೀರ್ಮಾನ ಮಾಡಿದ್ದೀವಿ. ಗ್ಯಾರೆಂಟಿ ಕಾರ್ಡ್ ಗಳಿಗೆ ನಾನು, ಡಿಕೆಶಿ ಇಬ್ರೂ ಸೈನ್ ಮಾಡಿದ್ದೀವಿ. ಎಲ್ಲಾ ಮನೆ ಮನೆಗಳಿಗೂ ಕಾರ್ಡ್ ಗಳನ್ನ ಹಂಚ್ತಾ ಇದ್ದೀವಿ ಎಂದರು .