ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇವಾಲಯಗಳಲ್ಲಿ ಕಳ್ಳತನ ಮಾಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಒಂದು ಕುಟುಂಬವನ್ನು ಹಿಂಬಾಲಿಸಿ ಹಲ್ಲೆ ನಡೆಸಿದ ಪರಿಣಾಮ ಹತ್ತು ವರ್ಷದ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ತಮಿಳುನಾಡಿನ ಪುದುಕೊಟ್ಟೈನಲ್ಲಿ ಈ ಘಟನೆ ನಡೆದಿದೆ.
ಕಿಲ್ಲನೂರು ಗ್ರಾಮದ ದೇವಾಲಯದಲ್ಲಿ ಕುಟುಂಬವೊಂದು ಕಳ್ಳತನ ಮಾಡುತ್ತಿದ್ದಾರೆಂಬ ಸಂದೇಶ ವಾಟ್ಸಾಪ್ನಲ್ಲಿ ಹರಿದಾಡಿತ್ತು. ಒಂದೇ ಕುಟುಂಬದ ಆರು ಮಂದಿ ಆಟೋದಲ್ಲಿ ತೆರಳುತ್ತಿದ್ದಾಗ ಗ್ರಾಮಸ್ಥರು ವಾಹನವನ್ನು ಹಿಂಬಾಲಿಸಿದ್ದಾರೆ. ದೇವಸ್ಥಾನದಲ್ಲಿ ಕಳ್ಳತನ ಮಾಡಿದ ಆರೋಪ ಇವರ ಮೇಲಿದೆ ಎಂದು ಕುಟುಂಬವನ್ನು ಹಿಡಿದು ದಾಳಿ ನಡೆಸಲಾಗಿದೆ. ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಗ್ರಾಮಸ್ಥರನ್ನು ತಡೆದರು.
ಆ ಕುಟುಂಬದ ಹತ್ತು ವರ್ಷದ ಬಾಲಕಿ ತೀವ್ರ ಗಾಯಗೊಂಡು ಪ್ರಾಣ ಕಳೆದುಕೊಂಡಿದ್ದಾಳೆ. ಕುಟುಂಬದವರೆಲ್ಲಾ ಸೇರಿ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾಗ ಕಳ್ಳತನದ ಆರೋಪ ಮಾಡಿ ದಾಳಿ ಮಾಡಿದ್ದಾರೆ ಎಂದು ಸಂತ್ರಸ್ತ ಮಹಿಳೆ ಲಿಲಿ ಪುಷ್ಪಾ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ.