ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ವಿಮಾನಯಾನ ಕ್ಷೆತ್ರದಲ್ಲಿ ಗಣನೀಯ ಪ್ರಗತಿ ಸಾಧಿಸಲಾಗಿದ್ದು 2014 ರಿಂದೀಚೆಗೆ ಎಂಟು ವರ್ಷಗಳಲ್ಲಿ ದೇಶದ ವಿಮಾನ ನಿಲ್ದಾಣಗಳ ಸಂಖ್ಯೆಯಲ್ಲಿ 100 ಶೇಕಡಾ ಹೆಚ್ಚಳ ಸಾಧಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದ್ದಾರೆ. ಆರ್ಸಿಎಸ್ ಉಡಾನ್ ಯೋಜನೆಯಡಿ ಭುವನೇಶ್ವರ ಮತ್ತು ರೂರ್ಕೆಲಾ ನಡುವಿನ ದೈನಂದಿನ ವಿಮಾನಯಾನ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುವ ವೇಳೆ ಅಂಶವನ್ನು ಹಂಚಿಕೊಂಡಿದ್ದಾರೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
“2014 ರವರೆಗೆ ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳು ಇದ್ದವು, ಇಂದು ಹೆಲಿಪೋರ್ಟ್ಗಳು ಮತ್ತು ವಾಟರ್ ಏರೋಡ್ರೋಮ್ಗಳು ಸೇರಿದಂತೆ ಈ ಸಂಖ್ಯೆ 148 ಕ್ಕೆ ಏರಿದೆ, ಇದು ಎಂಟು ವರ್ಷಗಳಲ್ಲಿ 100 ಶೇಕಡಾ ಹೆಚ್ಚಳವಾಗಿದೆ” ಎಂದು ಸಿಂಧಿಯಾ ಹೇಳಿದ್ದಾರೆ.
ಎಎನ್ಐ ವರದಿಗಳ ಪ್ರಕಾರ, ಸಾಂಕ್ರಾಮಿಕ ರೋಗಕ್ಕೆ ಮುಂಚಿತವಾಗಿ ಒಂದೇ ದಿನದಲ್ಲಿ 4,20,000 ಪ್ರಯಾಣಿಕರು ಪ್ರಯಾಣಿಸಿದ್ದಾರೆ ಎಂಬ ದಾಖಲೆಯನ್ನು ಸ್ಥಾಪಿಸಲಾಗಿದೆ ಎಂದು ಸಚಿವರು ಉಲ್ಲೇಖಿಸಿದ್ದು “ಈಗ ಆ ದಾಖಲೆಯನ್ನು ಮುರಿಯಲಾಗಿದೆ ಮತ್ತು ಒಂದು ದಿನದಲ್ಲಿ ನಾಲ್ಕು ಲಕ್ಷದ ಐವತ್ತು ಸಾವಿರ ಪ್ರಯಾಣಿಕರು ಪ್ರಯಾಣಿಸಿದ್ದಾರೆ. ಡಿಸೆಂಬರ್ 2022 ರಲ್ಲಿ, ತಿಂಗಳಿಗೆ ಪ್ರತಿ ದಿನ ನಾಲ್ಕು ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸಿದ್ದಾರೆ” ಎಂದು ಹೇಳಿದ್ದಾರೆ.