ಹೊಸದಿಗಂತ ವರದಿ, ಶಿವಮೊಗ್ಗ:
ರಾಜ್ಯದಲ್ಲಿ ಹಸಿರು ವಿದ್ಯುತ್ ಉತ್ಪಾದನೆಗೆ ಒತ್ತು ನೀಡಲಾಗಿದೆ ಎಂದು ಇಂಧನ ಸಚಿವ ವಿ.ಸುನೀಲ್ಕುಮಾರ್ ತಿಳಿಸಿದರು.
ನಗರದ ಮಂಡ್ಲಿಯಲ್ಲಿ ಮೆಸ್ಕಾಂ ನಗರ ವಿಭಾಗೀಯ ಕಚೇರಿ-2 ರ ಹಾಗೂ ಘಟಕ-6ರ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ರಾಜ್ಯದಲ್ಲಿ 1000 ಮೆಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದನೆಗೆ ಆದ್ಯತೆ ನೀಡಲಾಗಿದೆ. ಕುಸುಮ್-1 ಯೋಜನೆ ಅಡಿ ಇದಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ವೈಯುಕ್ತಿಕ ಸೋಲಾರ್ ಅಳವಡಿಕೆಗೆ ಬೆಂಬಲ ನೀಡಲಾಗುತ್ತಿದೆ ಎಂದರು.
ರಾಜ್ಯದಲ್ಲಿ ಯಾವುದೇ ಸಂದರ್ಭದಲ್ಲಿ ವಿದ್ಯುತ್ ಕೊರತೆ ಆಗದಂತೆ ಕೇಂದ್ರ ಸರ್ಕಾರದ ಜೊತೆ ನಿಕಟ ಸಂಪರ್ಕ ಇರಿಸಿಕೊಳ್ಳಲಾಗಿದೆ. ಹಾಗಾಗಿಯೇ ಕಲ್ಲಿದ್ದಲು ಅಭಾವದ ನಡುವೆಯೂ ರಾಜ್ಯದಲ್ಲಿ ವಿದ್ಯುತ್ ಅಭಾವ ಕಾಣಿಸಿಕೊಂಡಿಲ್ಲ. ಪ್ರತಿ ಬೇಸಿಗೆ ಸಂದರ್ಭದಲ್ಲೂ ರಾಜ್ಯದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಲೋಡ್ ಶೆಡ್ಡಿಂಗ್ ಇಲ್ಲದೇ ನಿರ್ವಹಿಸಿದ್ದೇವೆ. ಕಲ್ಲಿದ್ದಲ್ಲಿ ಕೊರತೆ ಬೇರೆ ರಾಜ್ಯಗಳಲ್ಲಿ ಆದಾಗ ವಿದ್ಯುತ್ ಕೊರತೆ ಆಗಲಿದೆ ಎಂದು ಕೆಲ ಮಾಧ್ಯಮಗಳು ಮತ್ತು ನಮ್ಮ ವಿರೋಧಿಗಳು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿದ್ದರು. ಆದರೆ ಏಪ್ರಿಲ್-ಮೇ ತಿಂಗಳ ಕಾರ್ಯಕ್ರಮವನ್ನು ನವೆಂಬರ್-ಡಿಸೆಂಬರ್ನಲ್ಲಿಯೇ ರೂಪಿಸಲಾಗುತ್ತಿದೆ. ಹಾಗಾಗಿ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಸಾಧ್ಯವಾಗಿದೆ ಎಂದರು.