ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇ.28 ರಂದು ಪ್ರಧಾನಿ ಮೋದಿ ನೂತನ ಸಂಸತ್ ಭವನ ಲೋಕಾರ್ಪಣೆ ಮಾಡಲಿದ್ದು,ಈ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಲು ಕಾಂಗ್ರೆಸ್, ಟಿಎಂಸಿ, ಆಪ್, ಸಿಪಿಐ ಸೇರಿದಂತೆ ಒಟ್ಟಾರೆ 19 ಪಕ್ಷಗಳು ನಿರ್ಧಾರ ಮಾಡಿವೆ.
ಮೇ.28ರಂದು ವೀರ್ ಸಾವರ್ಕರ್ ಜನ್ಮದಿನ, ಅಂದು ಸಂಸತ್ ಭವನ ಉದ್ಘಾಟನೆಯಾಗುತ್ತಿರುವುದರ ಬಗ್ಗೆ ಪ್ರತಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಒಟ್ಟಾರೆ 19ಪಕ್ಷಗಳು ಉದ್ಘಾಟನೆಯನ್ನು ಬಹಿಷ್ಕರಿಸುವುದಾಗಿ ಜಂಟಿ ಹೇಳಿಕೆ ನೀಡಿವೆ. ಪ್ರಜಾಪ್ರಭುತ್ವದ ಆತ್ಮವನ್ನೇ ಸಂಸತ್ನಿಂದ ಹೊರಹಾಕಲಾಗಿದೆ, ಹೀಗಿರುವಾಗ ಹೊಸ ಕಟ್ಟಡದಲ್ಲಿ ನಮಗೇನು ಮೌಲ್ಯವಿಲ್ಲ ಎಂದು ಪಕ್ಷಗಳು ಹೇಳಿವೆ.
ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಅಥವಾ ಗಾಂಧಿ ಜಯಂತಿಯಂದು ಲೋಕಾರ್ಪಣೆ ಮಾಡಬಹುದಿತ್ತು, ಆದರೆ ಸಾವರ್ಕರ್ ಜನ್ಮದಿನದಂದು ಮಾಡುತ್ತಿರುವುದಕ್ಕೆ ಒಪ್ಪಿಗೆ ಇಲ್ಲ. ಇನ್ನು ಸಂಸತ್ ಭವನದ ಉದ್ಘಾಟನೆಯನ್ನು ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರಿಂದ ಮಾಡಿಸಬೇಕು, ಆದರೆ ಇಲ್ಲಿ ರಾಷ್ಟ್ರಪತಿಗಳಿಗೆ ಅವಕಾಶ ನೀಡದೇ ಪ್ರಧಾನಿಯೇ ಲೋಕಾರ್ಪಣೆಗೆ ಮುಂದಾಗಿರುವುದು ದ್ರೌಪದಿ ಮುರ್ಮು ಅವರಿಗೆ ಮಾಡಿರುವ ಅವಮಾನ ಎಂದು ಪಕ್ಷಗಳು ಆರೋಪಿಸಿವೆ.
ಈ ಸಮಾರಂಭವನ್ನು ಬಹಿಷ್ಕರಿಸುವುದಾಗಿ ಮೊದಲು ಟಿಎಂಸಿ ಘೋಷಣೆ ಮಾಡಿತ್ತು, ಅದರ ಬೆನ್ನಲ್ಲೇ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ನಂತರ ಆರ್ಜೆಡಿ, ಡಿಎಂಕೆ ಹಾಗೂ ಶಿವಸೇನಾ ಬಣ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದೆ.
https://twitter.com/ANI/status/1661252961094492160?s=20