ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಎನ್ಕೌಂಟರ್ ನಡೆದಿದ್ದು, ಈ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರು ಹತರಾದರು. ಉಗ್ರರು ಭಾರೀ ದಾಳಿಗೆ ತಯಾರಾಗುತ್ತಿದ್ದಾರೆ ಎಂಬ ಗುಪ್ತ ವಲಯಗಳ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಅಲರ್ಟ್ ಆಗಿದ್ದಾರೆ. ಗುರುವಾರ ಬೆಳಗ್ಗೆ ಬಾರಾಮುಲ್ಲಾ ಕ್ರಿರಿ ಪ್ರದೇಶದಲ್ಲಿ ವನಿಗಂ ಗ್ರಾಮದಲ್ಲಿ ಉಗ್ರರು ಇರುವ ಪಕ್ಕಾ ಮಾಹಿತಿಯೊಂದಿಗೆ ಭದ್ರತಾ ಪಡೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಈ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದು, ಎನ್ಕೌಂಟರ್ ಜಾಗದಿಂದ ಒಂದು ರೈಫಿಲ್ ಮತ್ತು ಪಿಸ್ತೂಲ್ ಅನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸತ್ತ ಉಗ್ರರು ಶಕೀರ್ ಮಜಿದ್ ನಾಜರ್, ಹನನ್ ಅಹ್ಮದ್ ಸೆಹ್ ಎಂದು ಗುರುತಿಸಲಾಗಿದೆ. ಇವರಿಬ್ಬರು 2023ರಲ್ಲಿ ಉಗ್ರವಾದದಲ್ಲಿ ಸೇರಿಕೊಂಡಿದ್ದಾರೆ, ಮುಂದಿನ ವಿಚಾರಣೆ ಮುಂದುವರಿದಿದೆ.
ಬುಧವಾರ ಕೂಡ ಕುಪ್ವಾರಾ ಮಚಿಲ್ ಸೆಕ್ಟಾರ್ನಲ್ಲಿನ ನಿಯಂತ್ರಣ ರೇಖೆಯ ಬಳಿ ಒಳನುಗ್ಗಲು ಯತ್ನಿಸಿದ ಇಬ್ಬರು ಉಗ್ರರನ್ನು ಯೋಧರು ಗುಂಡಿಕ್ಕಿದರು. 24 ಗಂಟೆಗಳಲ್ಲಿ ಎರಡು ಎನ್ ಕೌಂಟರ್ಗಳಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಶ್ರೀನಗರ ಕೇಂದ್ರವಾಗಿ ಜಿ-20 ಸಭೆಗಳು ನಡೆಯುತ್ತಿವೆ. ಜಮ್ಮು-ಪಠಾಣ್ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ಲಾ ಸೇನಾ ಪೋಸ್ಟ್ಗಳಿಗೆ ಎಚ್ಚರಿಕೆ ನೀಡಲಾಗಿದೆ. ಜಮ್ಮು, ಸಾಂಬಾ ಮತ್ತು ಕಥೇವಾ ಕಂಟೋನ್ಮೆಂಟ್ ಪ್ರದೇಶಗಳಲ್ಲಿನ ಎಲ್ಲಾ ಶಾಲೆಗಳನ್ನು ಬುಧವಾರ ಮುಚ್ಚಲಾಗಿದೆ. ಕಳೆದ ತಿಂಗಳು ಪೂಂಚ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಐವರು ಯೋಧರು ಹುತಾತ್ಮರಾಗಿದ್ದರು. ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಪತ್ತೆಗೆ ಭಾರೀ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ.