ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಧಾನಸಭೆಯ ವಿಶೇಷ ಅಧಿವೇಶನ ನಡೆಯುತ್ತಿದೆ. ಇಂದು ಸದನ ಅಂತ್ಯಗೊಂಡಿದ್ದು, ಮೊದಲು 223 ಶಾಸಕರು ಪ್ರಮಾಣವಚನ ಸ್ವೀಕರಿಸಿರುವುದಾಗಿ ಹಂಗಾಮಿ ಸ್ವೀಕರ್ ಆರ್ ವಿ ದೇಶಪಾಂಡೆ ಘೋಷಿಸಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನ ಆರು ಮಂದಿ, ಕಾಂಗ್ರೆಸ್ ನ ಒಬ್ಬರು ಹಾಗೂ ಬಿಜೆಪಿಯ ಒಬ್ಬರು ಇಂದು ಸ್ವೀಕರ್ ಕೊಠಡಿಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ವಿಧಾನಸೌಧದಲ್ಲಿನ ಸ್ಪೀಕರ್ ಕೊಠಡಿಗೆ ಬಂದಂತ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ, ಹೆಚ್ ಡಿ ರೇವಣ್ಣ, ಹೆಚ್ ಟಿ ಮಂಜು, ಬಿಎನ್ ರವಿಕುಮಾರ್, ಸ್ವರೂಪ್ ಪ್ರಕಾಶ್, ಸಿಬಿ ಸುರೇಶ್ ಬಾಬು ಸೇರಿದಂತೆ ಆರು ಮಂದಿ ಜೆಡಿಎಸ್ ಶಾಸಕರು ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಇನ್ನೂ ಕಾಂಗ್ರೆಸ್ ನ ಎಬಿ ರಮೇಶ್ ಬಂಡಿಸಿದ್ದನಗೌಡ ಮತ್ತು ಬಿಜೆಪಿಯ ಪ್ರಭು ಚೌವ್ಹಾಣ್ ಕೂಡ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂಬುದಾಗಿ ಹಂಗಾಮಿ ಸ್ವೀಕರ್ ಆರ್ ವಿ ದೇಶಪಾಂಡೆ ಮಾಹಿತಿ ನೀಡಿದರು.
ನಿನ್ನೆಯ ಎರಡನೇ ದಿನ 27 ಮಂದಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ್ದರೇ, ಮೊದಲ ದಿನದಂದು 181 ಮಂದಿ ಪ್ರಮಾಣವಚನ ಸ್ವೀಕರಿಸಿದ್ದರು. ಒಟ್ಟಾರೆ ಈವರೆಗೆ 223 ಮಂದಿ ನೂತನ ಸದಸ್ಯರು ವಿಧಾನಸಭೆಯ ಸದಸ್ಯರಾಗಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದ್ದಾರೆ.