ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ಕುಟುಂಬದ ಮೂವರನ್ನು ಕಾಡಾನೆಗಳು ತುಳಿದು ಸಾಯಿಸಿರುವ ಭೀಕರ ಘಟನೆ ಜಾರ್ಖಂಡ್ ರಾಜ್ಯದ ಲತೇಹರ್ ಜಿಲ್ಲೆಯಲ್ಲಿ ನಡೆದಿದೆ. ಮೃತರಲ್ಲಿ ಮೂರು ವರ್ಷದ ಮಗುವೂ ಸೇರಿದೆ. ಶುಕ್ರವಾರ ನಸುಕಿನ 1.30ರ ಸುಮಾರಿಗೆ ಈ ಘಟನೆ ನಡೆದಿದ್ದು, 30 ವರ್ಷದ ಕೂಲಿ ಕಾರ್ಮಿಕ ಫನು ಭುನ್ಯಾನ್ ತನ್ನ 26 ವರ್ಷದ ಪತ್ನಿ ಬಬಿತಾ ದೇವಿ ಮತ್ತು ಮೂರು ವರ್ಷದ ಮಗಳೊಂದಿಗೆ ಮಲ್ಹಾನ್ ಪಂಚಾಯತ್ನ ಇಟ್ಟಿಗೆ ಗೂಡು ಘಟಕದ ಬಳಿಯ ತಾತ್ಕಾಲಿಕ ಗುಡಿಸಲಿನಲ್ಲಿ ಮಲಗಿದ್ದ ವೇಳೆ ಘಟನೆ ನಡೆದಿದೆ.
ಘಟನೆ ನಡೆದ ಪ್ರದೇಶವು ರಾಜಧಾನಿ ರಾಂಚಿಯಿಂದ 80 ಕಿ.ಮೀ. ಇದೆ. ಈ ವೇಳೆ ಇತರೆ ಇಟ್ಟಿಗೆ ಭಟ್ಟಿ ಕಾರ್ಮಿಕರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಚಂದ್ವಾ ಪೊಲೀಸ್ ಠಾಣಾಧಿಕಾರಿ ಅಮಿತ್ ಕುಮಾರ್ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಮೂರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಲತೇಹಾರ್ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ಕೆಲವು ದಿನಗಳಿಂದ ಸುಮಾರು 14 ಆನೆಗಳು ಬಲುಮಟ್ ಮತ್ತು ಚಂದಾವಾ ಅರಣ್ಯ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದು, ಗುರುವಾರ ಸಂಜೆ ಚಕ್ಲಾ ಪ್ರದೇಶದಲ್ಲಿ ಈ ಗುಂಪು ಕಾಣಿಸಿಕೊಂಡಿವೆ. ನಾವು ಜನರಿಗೆ ಎಚ್ಚರಿಕೆ ನೀಡಿದ್ದೇವೆ ಎಂದು ಲತೇಹಾರ್ ವಿಭಾಗೀಯ ಅರಣ್ಯಾಧಿಕಾರಿ ರೌಶನ್ ಕುಮಾರ್ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ನಡೆದ ಘಟನೆ ಕುರಿತು ಕೂಲಿಕಾರ್ಮಿಕರ ನಿದ್ದೆಗೆಡಿಸಿದ್ದು, ಆನೆಗಳ ಹಿಂಡು ಬರುತ್ತಿರುವುದು ಗಮನಕ್ಕೆ ಬಂದಿಲ್ಲ ಎಂದರು. ಮೃತ ಕುಟುಂಬವು ಗರ್ವಾ ಜಿಲ್ಲೆಯವರಾಗಿದ್ದು, ಕುಟುಂಬ ಸದಸ್ಯರಿಗೆ ತಕ್ಷಣದ ಸಹಾಯವಾಗಿ 60 ಸಾವಿರ ರೂ. ಅರಣ್ಯ ಇಲಾಖೆಯಿಂದ ನೀಡಲಾಗಿದೆ.