ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ FIR ದಾಖಲಾಗಿದ್ದು, ಇದರ ಬೆನ್ನಿಗೆ ಕರಕುಶಲ ಅಭಿವೃದ್ಧಿ ನಿಗಮದ ಎಂಡಿ ಡಿ. ರೂಪಾ ಪ್ರತಿಕ್ರಿಯೆ ನೀಡಿದ್ದಾರೆ.
ರಾಘವೇಂದ್ರ ಶೆಟ್ಟಿ ಮೇಲೆ FIR ಆಗಿದೆ. ಸರ್ಕಾರ ನೇಮಕ ಮಾಡಿದಾಗ DIN ಡಿಸ್ಕ್ವಾಲಿಫೈ (ಡೈರೆಕ್ಟರ್ ಐಡೆಂಟಿಪೀಕೇಷನ್ ನಂಬರ್ DIN disqualification) ಆಗಿದೆ ಎಂದು ಹೇಳಬೇಕಿತ್ತು. ಅದು ಗೊತ್ತಿದ್ದೂ ಹುದ್ದೆ ಅಲಂಕರಿಸಿ ಒಂದು ವರ್ಷ ಎಂಟು ತಿಂಗಳು ಸಂಬಳ ಪಡೆದಿದ್ದಾರೆ. ಸುಮಾರು 40 ಲಕ್ಷ ರೂಪಾಯಿಯಷ್ಟು ಹಣ ಪಡೆದುಕೊಂಡಂತಾಗಿದೆ. ನಿಗಮದಿಂದ ಎನ್ ಓ ಸಿ ಪಡೆದು ಕೈಗೊಂಡ ದುಬೈ ಪ್ರವಾಸ, ಸಂಬಳ ಸೇರಿ 40 ಲಕ್ಷ ರೂ ಹಣ ಪಡೆದಂತಾಗಿದೆ ಎಂದು ಹಿರಿಯ ಐಪಿಎಸ್ ಅಧಿಕಾರಿ ರೂಪಾ ಹೇಳಿದ್ದಾರೆ.
ರಾಘವೇಂದ್ರ ಶೆಟ್ಟಿ ಮೇಲೆ 31 ಕ್ರಿಮಿನಲ್ ಕೇಸ್, 15 ಜಾಮೀನುರಹಿತ ವಾರಂಟ್ ಇದೆ. ಇಂತಹವರಿಗೆ ಆ ಹುದ್ದೆ ಯಾಕೆ ಕೊಟ್ಟರೋ ಗೊತ್ತಿಲ್ಲ. ದಾಖಲೆಗಳನ್ನು ಯಾರಿಗೆಲ್ಲ ಕಳುಹಿಸಬೇಕೊ ಕಳಿಸಿದ್ದೇನೆ. ನಿಗಮದ ಸೆಕ್ರೆಟರಿ ಮೇಲೆ ಕೂಡ ದೂರು ದಾಖಲಿಸಲಾಗಿದೆ. ಸೆಕ್ರೆಟರಿ ಇದರಲ್ಲಿ ಶಾಮೀಲಾಗಿ, ವಿಷಯವನ್ನು ಮುಚ್ಚಿಡಲಾಗಿದೆ ಎಂದು ದೂರು ನೀಡಿದ್ದೇವೆ ಎಂದು ಐಪಿಎಸ್ ರೂಪಾ ಹೇಳಿದರು.
ರಾಘವೇಂದ್ರ ಶೆಟ್ಟಿ ತಪ್ಪು ಪಾನ್ ಕಾರ್ಡ್ ನೀಡಿದ್ದರು. ಅದರಿಂದ ನಮ್ಮ ನಿಗಮಕ್ಕೆ ಪೆನಾಲ್ಟಿ ಬಂದಿದೆ. ಅದರ ಜಾಡು ಹಿಡಿದು ನಾವು ಹೊರಟಿದ್ವಿ. ಇದರಿಂದ DIN ಡಿಸ್ಕ್ವಾಲಿಫೈ ಆಗಿರೋದು ಗೊತ್ತಾಯ್ತು. ಅದು ರದ್ದಾದರೆ ಯಾವುದೇ ಕಂಪನಿಯಲ್ಲಿ ನಿರ್ದೇಶಕರಾಗಲು ಸಾಧ್ಯವಿಲ್ಲ. ಇದರಿಂದಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ವಿವರಣೆ ನೀಡಿದರು.
ಪ್ರಕರಣ ಸಂಬಂಧ ಹೇಳಿಕೆ ನೀಡಿದ ಬೇಳೂರು ರಾಘವೇಂದ್ರ ಶೆಟ್ಟಿ, ಇದಕ್ಕೆಲ್ಲಾ ಹೆದರುವ ಜಾಯಮಾನ ನಮ್ಮದಲ್ಲ. ನಾನು ಆಕೆಯ ವಿರುದ್ದ ಕೇಸ್ ಹಾಕಲಿದ್ದೇನೆ, ಅದಕ್ಕೆ ಈ ರೀತಿ ಮಾಡ್ತಿದ್ದಾರೆ. ಆಕೆಗೆ ಕಾಮನ್ ಸೆನ್ಸ್ ಇಲ್ಲದಂತೆ ಈ ಕೆಲಸ ಮಾಡ್ತಿದ್ದಾರೆ. ಐಪಿಎಸ್ ಅನ್ನೋ ಕಾರಣಕ್ಕೆ ಎಲ್ಲರೂ ಅವರಿಗೆ ಮಹತ್ವ ಕೊಡ್ತಾರೆ. ನಿಗಮದ ಎಂಡಿ ಅಗಿದ್ದಾರೆ ಅಂದ್ರೆ ಅವರ ಕೆಲಸ ಹೇಗಿದೆ? ನಾನು ಇದೆಲ್ಲದಕ್ಕೂ ಕಾನೂನು ಮೂಲಕ ಉತ್ತರ ಕೊಡ್ತೀನಿ. ಅವರಿಗೆ ತಾಕತ್ ಇದ್ರೆ ಕಾನೂನು ಮೂಲಕ ಫೈಟ್ ಮಾಡಲಿ ಎಂದರು.