ರಾಜ್ಯದಲ್ಲಿ 6 ಲಕ್ಷ ಮನೆಗಳ ನಿರ್ಮಾಣಕ್ಕೆ ಗುರಿ: ಸಚಿವ ವಿ.ಸೋಮಣ್ಣ

ಹೊಸ ದಿಗಂತ ವರದಿ, ಚಿತ್ರದುರ್ಗ:

ಕೊಳಚ ಅಭಿವೃದ್ಧಿ ಮಂಡಳಿಯಿಂದ ರಾಜ್ಯದಲ್ಲಿ 1.80 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ. 40 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದು ವಸತಿ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಚಳ್ಳಕೆರೆ ನಗರದ ಕೆ.ಹೆಚ್.ಬಿ.ಲೇಔಟ್ ನಲ್ಲಿ ಮಂಗಳವಾರ ವಸತಿ ಇಲಾಖೆ, ರಾಜೀವ್ ಗಾಂಧಿ ವಸತಿ ನಿಗಮ, ಜಿಲ್ಲಾಡಳಿತ ಹಾಗೂ ಚಳ್ಳಕೆರೆ ನಗರ ಸಭೆ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ಆವಾಜ್ ಯೋಜನೆಯಡಿ(ನಗರದ) ಎ.ಹೆಚ್.ಪಿ ಘಟಕದಡಿ ಜಿ+2 ಮಾದರಿಯ 1008 ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮುಖ್ಯಮಂತ್ರಿಗಳು ೬ ಲಕ್ಷ ಮನೆಗಳ ನಿರ್ಮಾಣಕ್ಕೆ ಗುರಿ ನೀಡಿದ್ದಾರೆ. ಈಗಾಗಲೇ 4 ಲಕ್ಷ ಮನೆಗಳನ್ನು ನಗರ ಪ್ರದೇಶದಲ್ಲಿ ಹಾಗೂ ೧ ಲಕ್ಷ ಮನೆಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಿಸಿ ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಹೇಳಿದರು.
ರಾಜೀವ್ ಗಾಂಧಿ ವಸತಿ ನಿಗಮದಿಂದ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಸರ್ಕಾರದಿಂದ ಮಂಜೂರು ಮಾಡಿದ ಮನೆಗಳನ್ನು ಅಡಮಾನ ಹಾಗೂ ಭೋಗ್ಯಕ್ಕೆ ಪಡೆಯುವ ಪದ್ದತಿಯನ್ನು ತಡೆಯಲಾಗಿದೆ. ಮನೆಗಳನ್ನು ಮಹಿಳಾ ಫಲಾನುಭವಿಗಳ ಹೆಸರಿಗೆ ನೀಡಲಾಗುತ್ತಿದೆ ಎಂದರು.
ಮನೆಗಳಿಗೆ ನೀಡುತ್ತಿರುವ ಅನುದಾನ ಮೊತ್ತ ಹೆಚ್ಚಳಕ್ಕೆ ಕೇಂದ್ರ ಸಚಿವರಿಂದ ಜೊತೆ ಚರ್ಚಿಸಲಾಗುವುದು. ಗ್ರಾಮೀಣ ಭಾಗದಲ್ಲಿ ವಸತಿಯೋಜನೆ ಫಲಾನುಭವಿಗಳ ಆಯ್ಕೆಗೆ ಆದಾಯ ಮಿತಿಯನ್ನು 37 ಸಾವಿರ ರೂಪಾಯಿಗಳಿಂದ 1.20 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನಗರ ಪ್ರದೇಶದಲ್ಲಿ ೮೭ ಸಾವಿರ ಇದ್ದ ಆದಾಯ ಮಿತಿಯನ್ನು 3 ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಮಾಜಿ ಸಚಿವ ತಿಪ್ಪೇಸ್ವಾಮಿ ಹೆಸರಿಡಲು ಸೂಚನೆ

ಕಾಡುಗೊಲ್ಲರು, ಸುಡಗಾಡು ಸಿದ್ದರು ಸೇರಿದಂತೆ ಹಿಂದುಳಿದ ವರ್ಗಗಳಿಗೆ ದೇವರಾಜ ಅರಸು ನಿಗಮದಿಂದ ಮನೆ ನೀಡಲಾಗುತ್ತಿದೆ. ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಲೆಮಾರಿ ಅರೆ ಅಲೆಮಾರಿ ಜನಾಂಗದವರಿಗೆ 3500 ಮನೆಗಳ ಮಂಜೂರು ಮಾಡಲಾಗಿದೆ. ಚಳ್ಳಕೆರೆ ನಗರದಲ್ಲಿ ಒಟ್ಟು 48 ಎಕರೆ ಪ್ರದೇಶದಲ್ಲಿ 63 ಕೋಟಿ ವೆಚ್ಚದಲ್ಲಿ ಜಿ+೨ ಮಾದರಿಯ1008 ಮನೆಗಳ ನಿರ್ಮಾಣ ಮಾಡಲಾಗುವುದು. ನಗರ ಸಭೆಯ ಸದಸ್ಯರು ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಾಣವಾಗುವಂತೆ ಕಾಲ ಕಾಲಕ್ಕೆ ಪರಿಶೀಲನೆ ನೆಡಸಬೇಕು ಎಂದರು.
ನೂತನವಾಗಿ ನಿರ್ಮಿಸಲಾಗುತ್ತಿರುವ ವಸತಿ ಸಂಕೀರ್ಣ ಪ್ರದೇಶಕ್ಕೆ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಮಂತ್ರಿ ತಿಪ್ಪೇಸ್ವಾಮಿ ಅವರ ಹೆಸರನ್ನು ಇಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಮಂಜೂರು ಆಗಿರುವ ೧೯೮ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. ನಿಗದಿತ ಕಾಲಮತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಜಿ+೨ ಮಾದರಿಯಲ್ಲಿ ಹಮಾಲರಿಗೂ ಕೂಡ ಮನೆಗಳನ್ನು ನಿರ್ಮಿಸಲಾಗುತ್ತದೆ ಎಂದು ಹೇಳಿದರು.
ಶಾಸಕ ರಘುಮೂರ್ತಿ ಮಾತನಾಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 6500 ನಿವೇಶನ ರಹಿತ ಕುಟುಂಬಗಳಿವೆ. ಇವರಿಗೆ ವಸತಿ ಮಂಜೂರು ಮಾಡಬೇಕು. ಮಂಜೂರು ಮಾಡಿದ ಆಶ್ರಯ ಮನೆಗಳ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಗುರಿ ಹೆಚ್ಚಳ ಮಾಡಬೇಕು.ಆಶ್ರಯ ಮನೆಗಳ ನೀಡುವ ಅನುದಾನ ಮೊತ್ತವನ್ನು ಹೆಚ್ಚಿಸಬೇಕು ಎಂದರು.
ಈ ಸಂದರ್ಭದಲ್ಲಿ ನಗರ ಸಭೆ ಅಧ್ಯಕ್ಷ ಸುಮ ಅಂಜನಪ್ಪ, ಉಪಾಧ್ಯಕ್ಷೆ ಮಂಜುಳ ಪ್ರಸನ್ನ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರನಾಯಕ, ಜಿಲ್ಲಾಧಿಕಾರಿ ಕವಿತಾ.ಎಸ್.ಮನ್ನಿಕೇರಿ, ನಗರ ಸಭೆ ಆಯುಕ್ತೆ ಲೀಲಾವತಿ, ತಹಶಿಲ್ದಾರ ರಘುಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!